ADVERTISEMENT

2ಎ ಮೀಸಲಾತಿಗಾಗಿ ಬಲಿಜ ಸಮುದಾಯದ ಪಾದಯಾತ್ರೆ

ಕೈವಾರದಿಂದ ವಿಧಾನಸೌಧ ಚಲೋ ನಡೆಸಲು ಸಮಗ್ರ ಬಲಿಜ ವೇದಿಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 17:51 IST
Last Updated 20 ನವೆಂಬರ್ 2022, 17:51 IST
ಬಲಿಜ ವೇದಿಕೆ ಆಯೋಜಿಸಿದ್ದ ಚಿಂತನಾ ಕಾರ್ಯಕ್ರಮದಲ್ಲಿ ಮುಖಂಡರಾದ ಎನ್. ಮುನಿಕೃಷ್ಣ ದಾಸರಹಳ್ಳಿ, ಪಾವಗಡ ಕೊಂಡಪ್ಪ, ಸೂರ್ಯನಾರಾಯಣ ಚಿತ್ರದುರ್ಗ, ಮಂಡ್ಯ ನಾಗರಾಜು, ಹಾಸನ್ ಗೌತಮ್ ಪಾಲ್ಗೊಂಡಿದ್ದರು
ಬಲಿಜ ವೇದಿಕೆ ಆಯೋಜಿಸಿದ್ದ ಚಿಂತನಾ ಕಾರ್ಯಕ್ರಮದಲ್ಲಿ ಮುಖಂಡರಾದ ಎನ್. ಮುನಿಕೃಷ್ಣ ದಾಸರಹಳ್ಳಿ, ಪಾವಗಡ ಕೊಂಡಪ್ಪ, ಸೂರ್ಯನಾರಾಯಣ ಚಿತ್ರದುರ್ಗ, ಮಂಡ್ಯ ನಾಗರಾಜು, ಹಾಸನ್ ಗೌತಮ್ ಪಾಲ್ಗೊಂಡಿದ್ದರು   

ಬೆಂಗಳೂರು: ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಕರ್ನಾಟಕ ಸಮಗ್ರ ಬಲಿಜ ವೇದಿಕೆ ನಿರ್ಧರಿಸಿದೆ.

ಮೀಸಲಾತಿಗಾಗಿ ಹೋರಾಟ ರೂಪಿಸುವ ಸಂಬಂಧ ಭಾನುವಾರ ನಡೆದ ಚಿಂತನಾ ಸಭೆಯಲ್ಲಿ ವಿಧಾನಸೌಧ ಚಲೋ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

ಬಲಿಜ ಹಾಗೂ ಅದರ ಉಪಜಾತಿಗಳು ಆರ್ಥಿಕ ಮತ್ತು ಸಾಮಾಜಿಕವಾಗಿಅತ್ಯಂತ ಹಿಂದುಳಿದ ಸಮುದಾಯಗಳಾಗಿವೆ. ಸದ್ಯ ಶಿಕ್ಷಣಕ್ಕೆ 2ಎ ಮೀಸಲಾತಿ ಕಲ್ಪಿಸಲಾಗಿದೆ. ಉದ್ಯೋಗದ ವಿಷಯದಲ್ಲಿ 3ಎ ಪಟ್ಟಿಯಲ್ಲಿ ಉಳಿಸಲಾಗಿದೆ. ರಾಜಕೀಯ ಮೀಸಲಾತಿಯೂ ಇಲ್ಲವಾಗಿದೆ ಎಂದು ಸಮುದಾಯದ ಮುಖಂಡ ಎಸ್.ರಮೇಶ್‌ (ಕೆಸಿಪಿ) ಹೇಳಿದರು.

ADVERTISEMENT

ಬಲಿಜ ಸಮುದಾಯದ ಬಹುತೇಕರು ಅರಿಸಿನ–ಕುಂಕುಮ, ಬಳೆ, ಹೂವು, ಎಲೆ–ಅಡಿಕೆ ಮಾರಾಟ ರೀತಿಯ ಬೀದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. 2ಎ ಮೀಸಲಾತಿ ನೀಡುವ ಮೂಲಕ ಉದ್ಯೋಗ ಮತ್ತು ರಾಜಕೀಯದಲ್ಲಿ ಮೀಸಲಾತಿ ಸಿಗುವಂತೆ ಮಾಡಬೇಕು. ಈ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕರ್ನಾಟಕ ಬಲಿಜ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸಮುದಾಯದ ಮುಖಂಡರನ್ನೇ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.

ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಬಲಿಜ ಸಮುದಾಯದ ಕುಲದೇವರಾದ ಕೈವಾರ ತಾತಯ್ಯ ಅವರ ಸನ್ನಿಧಿಯಿಂದ ಪಾದಯಾತ್ರೆ ಆರಂಭಿಸಲು ನಿರ್ಧರಿಸಲಾಯಿತು ಎಂದರು.

ಮುಖಂಡರಾದ ಎನ್. ಮುನಿಕೃಷ್ಣ ದಾಸರಹಳ್ಳಿ, ಪಾವಗಡ ಕೊಂಡಪ್ಪ, ಸೂರ್ಯನಾರಾಯಣ ಚಿತ್ರದುರ್ಗ, ಮಂಡ್ಯ ನಾಗರಾಜು, ಹಾಸನ ಗೌತಮ್ ಮತ್ತು ಎಲ್ಲಾ ಜಿಲ್ಲೆಗಳ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.