ADVERTISEMENT

ಹೋಂ ಕ್ವಾರಂಟೈನ್‌ನಲ್ಲಿದ್ದ ಯುವಕ ಮಲೇರಿಯಾ ಮಾತ್ರೆ ಖರೀದಿಸಲು ಬಂದ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 2:45 IST
Last Updated 28 ಮಾರ್ಚ್ 2020, 2:45 IST
   

ಬೆಂಗಳೂರು: ವಿದೇಶದಿಂದ ನಗರಕ್ಕೆ ಬಂದು ಹೋಂ ಕ್ವಾರಂಟೈನ್‌ಲ್ಲಿದ್ದ 28 ವರ್ಷದ ಯುವಕನೊಬ್ಬ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ರಾಜಾರೋಷವಾಗಿ ಮನೆಯಿಂದ ಹೊರಗೆ ಬಂದು ಓಡಾಡಿದ್ದು, ಈ ಸಂಬಂಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನಶಂಕರಿ 2ನೇ ಹಂತದ ಕಾವೇರಿ ನಗರದ ನಿವಾಸಿಯಾದ ಯುವಕ, ಇತ್ತೀಚೆಗಷ್ಟೇ ವಿದೇಶದಿಂದ ಬಂದಿದ್ದ. ಮನೆಯಲ್ಲೇ ಇರುವಂತೆ ಹೇಳಿದ್ದ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ಕೈಗೆ ಮುದ್ರೆ ಸಹ ಹಾಕಿದ್ದರು.

ಇದೇ 23ರಂದು ಬೆಳಿಗ್ಗೆ ಮನೆಯಿಂದ ಹೊರಗೆ ಬಂದಿದ್ದ ಯುವಕ, ರಸ್ತೆಯಲ್ಲೆಲ್ಲ ಓಡಾಡಿ ನಂತರ ಔಷಧಿ ಅಂಗಡಿಯೊಂದಕ್ಕೆ ಹೋಗಿದ್ದ. ಕೆಲ ಮಾತ್ರೆಗಳನ್ನು ತೆಗೆದುಕೊಂಡು ಪುನಃ ಮನೆಗೆ ಹೋಗಿದ್ದ.

ADVERTISEMENT

ಇದಾದ ನಂತರ ಮಧ್ಯಾಹ್ನವೂ ಔಷಧಿ ಮಳಿಗೆಗೆ ಬಂದಿದ್ದ ಯುವಕ, ಮಲೇರಿಯಾ ಮಾತ್ರೆ ನೀಡುವಂತೆ ಮಳಿಗೆಯವರನ್ನು ಕೇಳಿದ್ದ. ಯುವಕನ ಕಂಡು ಅನುಮಾನಗೊಂಡ ಮಳಿಗೆಯವರು ಆತನ ಕೈ ನೋಡಿದ್ದರು. ಮುದ್ರೆ ಇರುವುದು ಗಮನಕ್ಕೆ ಬರುತ್ತಿದ್ದಂತೆ ಠಾಣೆಗೆ ಮಾಹಿತಿ ನೀಡಿದ್ದರು.

‘ಔಷಧಿ ಮಳಿಗೆಯ ಜಗದೀಶ್ ಎಂಬುವರಿಂದ ದೂರು ಪಡೆದು ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.