ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಣತ್ತೂರು ಪ್ರದೇಶದ ವಿದ್ಯಾರ್ಥಿಗಳು ಮತ್ತು ಪೋಷಕರು ಉತ್ತಮ ರಸ್ತೆಗಾಗಿ ಮೇಣದಬತ್ತಿ ಮತ್ತು ಮೊಬೈಲ್ ಟಾರ್ಚ್ಗಳನ್ನು ಹಿಡಿದು ಮೌನಪ್ರತಿಭಟನೆ ಮಾಡಿದ್ದಾರೆ.
ಸಂಗಪ್ಪ ದೇಸಾಯಿ ಎನ್ನುವವರು ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.
ಬಳಗೆರೆ–ಪಣತ್ತೂರು ರಸ್ತೆಯ ಮೂಲಕ ಸಾಗುವಾಗ ಪಣತ್ತೂರು ಕ್ರಾಸ್ನಲ್ಲಿ ಬುಧವಾರ ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿರುವುದನ್ನು ವಿದ್ಯಾರ್ಥಿಗಳೇ ವಿವರಿಸಿದ್ದಾರೆ.
ಶಾಲೆಯಿಂದ ಮಕ್ಕಳು ಸರಿಯಾದ ಸಮಯಕ್ಕೆ ಮನೆಗೆ ಬರಲು ಸಾಧ್ಯವಾಗುತ್ತಿಲ್ಲ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪೋಷಕರು ದೂರಿದ್ದಾರೆ.
ವಿಡಿಯೊ ಅನ್ನು ಮರು ಟ್ವೀಟ್ ಮಾಡಿರುವ ಕಿರಣ್ ಮಜುಂದಾರ್ ಶಾ, ’ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಯೇ? ರಾಜಕಾರಣಿಗಳನ್ನು ಪ್ರತಿಯೊಂದಕ್ಕೂ ದೂರಲು ಸಾಧ್ಯವಿಲ್ಲ. ಕೆಳಹಂತದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಅಧಿಕಾರಿಗಳ ಜತೆಗೆ ಗುತ್ತಿಗೆದಾರರು ಸಹ ಉತ್ತರದಾಯಿತ್ವ ಹೊಂದಿದ್ದಾರೆ’ ಎಂದು ಹೇಳಿದ್ದಾರೆ.
ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಹಲವರು, ಈ ಪ್ರದೇಶಕ್ಕೂ ಪ್ರಧಾನಿ ಅವರು ಭೇಟಿ ನೀಡಲಿ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.