ಬೆಂಗಳೂರು: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು 2022ರ ಡಿಸೆಂಬರ್ಗೆ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಬುಧವಾರ ವಿಧಾನ ಪರಿಷತ್ನಲ್ಲಿ ತಿಳಿಸಿದರು.
ಜೆಡಿಎಸ್ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ದಶಪಥವನ್ನಾಗಿ ಮಾಡುವ ಈ ಹೆದ್ದಾರಿ ಕಾಮಗಾರಿಯನ್ನು ಎರಡು ಪ್ಯಾಕೇಜ್ಗಳಲ್ಲಿ ಕೈಗೊಳ್ಳಲಾಗಿದೆ. 56.20 ಕಿ.ಮೀ. ಉದ್ದದ ಬೆಂಗಳೂರಿನಿಂದ ನಿಡಘಟ್ಟದವರೆಗೆ ಒಂದನೇ ಪ್ಯಾಕೇಜ್ ಮತ್ತು 61.104 ಕಿ.ಮೀ. ಉದ್ದದ ನಿಡಘಟ್ಟದಿಂದ ಮೈಸೂರಿನವರೆಗೆ ಇನ್ನೊಂದು ಪ್ಯಾಕೇಜ್ ಮಾಡಲಾಗಿದೆ’ ಎಂದುವಿವರಿಸಿದರು.
ಬೆಂಗಳೂರಿನಿಂದ ನಿಡಘಟ್ಟದವರೆಗಿನ ಕಾಮಗಾರಿಗೆ ₹2190 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ಸಿವಿಲ್ ಕಾಮಗಾರಿಗೆ ₹875.90 ಕೋಟಿ ಮತ್ತು ಭೂಸ್ವಾಧೀನಕ್ಕೆ ₹2018.75 ಕೋಟಿ ವೆಚ್ಚವಾಗಿದೆ. 2022ರ ಮೇ 2ರ ಒಳಗೆ ಈ ಕಾಮಗಾರಿ ಮುಕ್ತಾಯಗೊಳಿಸುವಂತೆ ಸೂಚಿಸಲಾಗಿತ್ತು ಎಂದು ಸಚಿವರು ವಿವರಿಸಿದರು.
ನಿಡಘಟ್ಟದಿಂದ ಮೈಸೂರುವರೆಗಿನ ಕಾಮಗಾರಿಗೆ ₹2283 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ಸಿವಿಲ್ ಕಾಮಗಾರಿಗೆ ₹882.66 ಕೋಟಿ ಮತ್ತು ಭೂಸ್ವಾಧೀನಕ್ಕೆ ₹1278.13 ಕೋಟಿ ವೆಚ್ಚವಾಗಿದೆ. ಈ ಕಾಮಗಾರಿಯನ್ನು ಸಹ 2022ರ ಸೆಪ್ಟೆಂಬರ್ 7ಕ್ಕೆ ಮುಕ್ತಾಗೊಳಿಸುವಂತೆ ಗಡುವು ನೀಡಲಾಗಿತ್ತು. ಆದರೆ, ಕೋವಿಡ್ ಮತ್ತುಭೂಸ್ವಾಧೀನ ಕಾರಣಗಳಿಂದ ಪ್ರಸಕ್ತ ವರ್ಷ ಡಿಸೆಂಬರ್ ಅಂತ್ಯದ ಒಳಗೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.
ಕೆಳಸೇತುವೆ ಮತ್ತು ಸರ್ವಿಸ್ ರಸ್ತೆಗಳ ಗುಣಮಟ್ಟ ಕಾಪಾಡಲು ಸಮಿತಿ ರಚಿಸಲಾಗುವುದು ಎಂದುತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.