ADVERTISEMENT

ಬೆಳೆಸಾಲ: ಮುಖ್ಯಮಂತ್ರಿ ಜಿಲ್ಲೆಯಲ್ಲೇ ರೈತರಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 16:38 IST
Last Updated 8 ಡಿಸೆಂಬರ್ 2018, 16:38 IST
   

ರಾಮನಗರ: ತಾಲ್ಲೂಕಿನ ಹುಚ್ಚಮ್ಮನದೊಡ್ಡಿ ಗ್ರಾಮದ ರೈತರಾದ ಹನುಮಂತಯ್ಯ ಹಾಗೂ ರಾಮಣ್ಣ ಎಂಬುವರ ಕುಟುಂಬದವರಿಗೆ ಕೃಷಿ ಸಾಲ ಮರುಪಾವತಿ ಮಾಡುವಂತೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದೆ.

ಕರ್ನಾಟಕ ಬ್ಯಾಂಕ್‌ನಿಂದ 2009ರಲ್ಲಿ ಹುಚ್ಚಮ್ಮನದೊಡ್ಡಿ ಗ್ರಾಮದ ಹನುಮಂತಯ್ಯ ಕುಟುಂಬದವರು ₹2.9 ಲಕ್ಷ ಹಾಗೂ ರಾಮಣ್ಣ ಕುಟುಂಬದವರು ₹2.7ಲಕ್ಷ ಬೆಳೆ ಸಾಲ ಪಡೆದಿದ್ದರು. ಕೆಲವೊಮ್ಮೆ ಬಡ್ಡಿ ಪಾವತಿ ಮಾಡಿದ್ದು, ಅಸಲಿನ ಬಾಕಿಯನ್ನು ಹಾಗೆಯೇ ಉಳಿಸಿಕೊಂಡ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿದೆ. ಸಾಲ ವಸೂಲಾತಿಗೆ ಬ್ಯಾಂಕ್ ನ್ಯಾಯಾಲಯದ ಮೊರೆ ಹೋಗಿದ್ದು, ರಾಮನಗರದ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮೂಲಕ ನೋಟಿಸ್ ಜಾರಿಯಾಗಿದೆ.

ಕೃಷಿ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದರ ಬೆನ್ನಲ್ಲೇ ಅವರ ಜಿಲ್ಲೆಯಲ್ಲಿಯೇ ನೋಟಿಸ್‌ ಜಾರಿಯಾಗಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಕೃಷಿ ಚಟುವಟಿಕೆ ಹಾಗೂ ಬೋರ್‌ವೆಲ್‌ ಕೊರೆಸಲು ಸಾಲ ಪಡೆದಿದ್ದೆವು. ಬೋರ್‌ಬೆಲ್‌ ಕೈಕೊಟ್ಟ ಪರಿಣಾಮ ಬೆಳೆ ಕೈಕೊಟ್ಟಿತು. ಆದಾಗ್ಯೂ ಆಗಾಗ್ಗೆ ಬಡ್ಡಿ ಪಾವತಿಸುತ್ತಾ ಬಂದಿದ್ದೆವು. ಈ ನಡುವೆ ಸಾಲ ವಾಪಸ್‌ ನೀಡುವಂತೆ ಬ್ಯಾಂಕ್‌ ಅಧಿಕಾರಿಗಳು ಮನೆಗೆ ಬಂದು ಒತ್ತಾಯಿಸುತ್ತಿದ್ದರು. ಇದೀಗ ನ್ಯಾಯಾಲಯದ ಮೂಲಕ ನೋಟಿಸ್‌ ನೀಡಿದ್ದಾರೆ. ನಮಗೆ ದಿಕ್ಕು ತೋಚಲಾಗಿದೆ’ ಎಂದು ರೈತರಾದ ವಾಸು ಹಾಗೂ ಗೋವಿಂದಯ್ಯ ತಿಳಿಸಿದರು.

ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ರೈತರ ನೆರವಿಗೆ ನಿಲ್ಲುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.