ADVERTISEMENT

ಬಸವಣ್ಣನ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು

ಶ್ರೀಧರ ಗೌಡರ
Published 18 ಫೆಬ್ರುವರಿ 2019, 20:30 IST
Last Updated 18 ಫೆಬ್ರುವರಿ 2019, 20:30 IST
ಬಸವಣ್ಣ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿರುವುದು
ಬಸವಣ್ಣ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿರುವುದು   

ಕೂಡಲಸಂಗಮ: ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದಲ್ಲಿರುವ ಬಸವಣ್ಣನ ಐಕ್ಯ ಮಂಟಪದ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಐಕ್ಯಸ್ಥಳದ ದರ್ಶನ ಪಡೆಯಲು ದೇಶ ವಿದೇಶಗಳಿಂದ ನಿತ್ಯ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವವರಲ್ಲಿ ಬಹಳಷ್ಟು ಜನರು ಲಿಂಗದತ್ತ ನಾಣ್ಯಗಳನ್ನು ಎಸೆಯುತ್ತಾರೆ. ಇದರಿಂದ ಅದಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಸ್ಥಳೀಯರ ಅನಿಸಿಕೆ.

ದರ್ಶನಕ್ಕೆ ಬಂದವರು, ನಾಣ್ಯ ಎಸೆಯುವಂಥ ಮೌಢ್ಯವನ್ನು ಬಿಡಬೇಕು ಎಂದು ಮನವಿ ಮಾಡಿರುವ ಬಸವ ಭಕ್ತರು, ಈ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯನ್ನು ಆಗ್ರಹಿಸಿದ್ದಾರೆ.

ADVERTISEMENT

ಮಂಡಳಿಯು, ಕಾಣಿಕೆಯನ್ನು ಹುಂಡಿಯಲ್ಲಿ ಹಾಕುವಂತೆ ಹಾಗೂ ಹಣವನ್ನು ಎಸೆಯದಂತೆ ಈ ಸ್ಥಳದಲ್ಲಿ ಫಲಕ ಅಳವಡಿಸಿದೆ. ಆದರೂ ಒಬ್ಬರನ್ನು ನೋಡಿ ಮತ್ತೊಬ್ಬರು ಎಸೆಯುತ್ತಲೇ ಇರುತ್ತಾರೆ. ಅಧಿಕವಾದಾಗ ಮಂಡಳಿಯ ಸಿಬ್ಬಂದಿ ಅವುಗಳನ್ನು ಆಯ್ದು ಹುಂಡಿಗೆ ಹಾಕುತ್ತಾರೆ. ಈ ಸ್ಥಳದಲ್ಲಿ, ಫೈಬರ್‌ ಗ್ಲಾಸ್‌ ಅಳವಡಿಸುವ ಮೂಲಕ ಲಿಂಗವನ್ನು ರಕ್ಷಿಸುವ ಕಾರ್ಯಕ್ಕೆ ಶೀಘ್ರವೇ ಮುಂದಾಗಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹದೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ.

**

ಬಿರುಕು ಬಿಟ್ಟ ಲಿಂಗಕ್ಕೆ ಕಂತಿಯನ್ನು ತುಂಬಿಸಿ, ಐತಿಹಾಸಿಕ ಸ್ಮಾರಕವಾದ ಬಸವಣ್ಣನ ಐಕ್ಯಸ್ಥಳದ ಲಿಂಗವನ್ನು ಸಂರಕ್ಷಿಸುವ ಕೆಲಸಕ್ಕೆ ಮಂಡಳಿ ಮುಂದಾಗಬೇಕು.
- ಮಾತೆ ಮಹಾದೇವಿ, ಪೀಠಾಧ್ಯಕ್ಷೆ, ಬಸವ ಧರ್ಮ ಪೀಠ, ಕೂಡಲಸಂಗಮ

**

ಮುಗ್ಧ ಭಕ್ತರ ಧಾರ್ಮಿಕ ಆಚರಣೆಗಳಿಂದ ಮೂಲ ಐಕ್ಯಮಂಟಪ ತನ್ನ ಸ್ವರೂಪ ಕಳೆದುಕೊಳ್ಳುತ್ತದೆ. ಧಕ್ಕೆ ಆಗದಂತೆ ಅದನ್ನು ರಕ್ಷಿಸುವ ಕೆಲಸ ತುರ್ತಾಗಿ ಆಗಬೇಕು
* ಬಸವ ಜಯಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ

**

ಐಕ್ಯ ಸ್ಥಳದ ಲಿಂಗವನ್ನು ರಕ್ಷಿಸುವ ಕಾರ್ಯವನ್ನು ಮಾಡುತ್ತೇವೆ. ಮೇಲಧಿಕಾರಿಗಳ ಗಮನಕ್ಕೆ ತಂದು ಗ್ಲಾಸ್ ವಾಲ್ ನಿರ್ಮಿಸುತ್ತೇವೆ
- ಆರ್.ಎಸ್.ಹಿರೇಮಠ, ತಹಶೀಲ್ದಾರ್, ಕೂಡಲಸಂಗಮ ಅಭಿವೃದ್ಧಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.