ADVERTISEMENT

'ಅವ್ವ' ನೆನಪಿನಲ್ಲಿ ಪುಸ್ತಕ ಪ್ರಕಟಿಸುವ ಬೊಮ್ಮಾಯಿ: ಬಿ.ಎಲ್‌.ಸಂತೋಷ್ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 17:05 IST
Last Updated 28 ಜುಲೈ 2021, 17:05 IST
ಬಸವರಾಜ ಬೊಮ್ಮಾಯಿ ಮತ್ತು ಅವ್ವ ಪುಸ್ತಕ
ಬಸವರಾಜ ಬೊಮ್ಮಾಯಿ ಮತ್ತು ಅವ್ವ ಪುಸ್ತಕ   

ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿ ವರ್ಷ ತಮ್ಮ ತಾಯಿಯ ನೆನಪಿನಲ್ಲಿ ಒಂದು ಪುಸ್ತಕ ಪ್ರಕಟಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಟ್ವೀಟ್‌ ಮಾಡಿದ್ದಾರೆ.

‘ಅವ್ವ’ ಹೆಸರಿನಲ್ಲಿ ಟ್ರಸ್ಟ್‌ ಮೂಲಕ ಭಾರತೀಯ ಮತ್ತು ವಿದೇಶಿ ಭಾಷೆಯಲ್ಲಿರುವ ಸಣ್ಣ ಕತೆ, ಕವಿತೆ, ಜನಪದ ಗೀತೆ, ಲೋಕೋಕ್ತಿಯನ್ನು ಪ್ರಕಟಿಸುವ ವಿಶೇಷ ಆಸಕ್ತಿಯನ್ನು ಅವರು ಬೆಳೆಸಿಕೊಂಡಿದ್ದಾರೆ ಎಂದು ಸಂತೋಷ್‌ ಹೇಳಿದ್ದಾರೆ.

ಸಂತೋಷ್‌ ಅವರ ಈ ಟ್ವೀಟ್‌ ಅನ್ನು ಬೊಮ್ಮಾಯಿ ಅವರೂ ಸಹ ಹಂಚಿಕೊಂಡಿದ್ದಾರೆ. ಕೆಲವು ಟ್ವೀಟಿಗರು, 'ಬಸವರಾಜ ಹೊರಟ್ಟಿ ಅವರು ಅವ್ವ ಟ್ರಸ್ಟ್‌ ಮೂಲಕ ಪ್ರಶಸ್ತಿ ಕೊಡ್ತಿದ್ದಾರೆ; ಬಸವರಾಜ ಬೊಮ್ಮಾಯಿ ಅಂತ ಗೊಂದಲ ಮಾಡಿಕೊಂಡಿರಬೇಕು' ಎಂದಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವು ಸುದ್ದಿಗಳ ಲಿಂಕ್‌ ಹಂಚಿಕೊಂಡರೆ, ಮತ್ತೆ ಕೆಲವರು; ಇಲ್ಲ ಬೊಮ್ಮಾಯಿ ಅವರು ಪುಸ್ತಕ ಹೊರ ತರುತ್ತಾರೆ ಎಂದು ಪುಸ್ತಕದ ಪ್ರತಿಗಳ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.

ADVERTISEMENT

ಆದರೆ, ನೆಟ್ಟಿಗರ ಆ ಎರಡೂ ವಾದಗಳು ಸರಿಯೇ. ಪ್ರಶಸ್ತಿ ಕೊಡ ಮಾಡುವ ಹೊರಟ್ಟಿ ಅವರು ಹಾಗೂ ಪುಸ್ತಕ ಪ್ರಕಟಿಸುವ ಬೊಮ್ಮಾಯಿ ಅವರು ಇಬ್ಬರೂ 'ಅವ್ವ' ಹೆಸರಿನಲ್ಲಿಯೇ ತಮ್ಮ ಸೇವೆ ಮುಂದುವರಿಸಿದ್ದಾರೆ. ಹೊರಟ್ಟಿ ಅವರು ಅವ್ವ ಪ್ರತಿಷ್ಠಾನದಿಂದ ಪತ್ರಕರ್ತೆಗೂ ಪ್ರಶಸ್ತಿ ನೀಡಲು ಆರಂಭಿಸಿದ್ದಾರೆ.

ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನ, ಅವ್ವ ಪ್ರತಿಷ್ಠಾನದಿಂದ ‘ಅವ್ವ’ ಎಂಬ ಹೆಸರಿನಲ್ಲಿಯೇ ಸಾಕಷ್ಟು ಪುಸ್ತಕಗಳು ಪ್ರಕಟವಾಗಿವೆ. ಆತ್ಮಕತೆಗಳಲ್ಲಿ ಅವ್ವ, ವಿಶ್ವಸಾಹಿತ್ಯ, ಕಾವ್ಯದಲ್ಲಿ ಅವ್ವ, ನಾಟಕಗಳಲ್ಲಿ, ಜನಪದ ಸಾಹಿತ್ಯದಲ್ಲಿ, ಕಾದಂಬರಿಗಳಲ್ಲಿ ಅವ್ವ ಹೀಗೆ ಸರಣಿ ಪುಸ್ತಕಗಳು ಪ್ರಕಟವಾಗಿವೆ. ಈ ಪುಸ್ತಕಗಳ ಸಂಪಾದಕರು ಚಂದ್ರಶೇಖರ ವಸ್ತ್ರದ. ಅವರು ಗದುಗಿನ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಚಾರ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.