ಶಿರಸಿ: ‘ನಾನ್ಯಾಕೆ ಲಾಬಿ ಮಾಡಿ ಸಚಿವನಾಗಬೇಕು? ನನಗೆ ಅರ್ಹತೆ ಇಲ್ಲವೇನು?’ ಎಂದು ಕೇಳಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಅರ್ಹತೆಯನ್ನು ನೋಡಿ ಸಚಿವ ಸ್ಥಾನ ನೀಡುವುದಾದರೆ ನೀಡಲಿ’ ಎಂದರು.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಈವರೆಗೆ ಯಾವ ಸ್ಥಾನಕ್ಕೂ ಲಾಬಿ ಮಾಡಿಲ್ಲ. ಸತ್ತರೂ ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ. ಸಭಾಪತಿ ಸ್ಥಾನದಲ್ಲಿದ್ದು ರಾಜಕೀಯ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಸರ್ಕಾರಕ್ಕೆ ಅದರದೇ ಆದ ಸಮಸ್ಯೆಗಳಿರುತ್ತವೆ. ಸಚಿವ ಸ್ಥಾನದ ಆಕಾಂಕ್ಷಿಗಳು ಹಲವರಿರುತ್ತಾರೆ. ಲಾಬಿ ಮಾಡುವುದರಲ್ಲಿ ಅರ್ಥವಿಲ್ಲ. ಸಚಿವ ಸ್ಥಾನದ ಬಗ್ಗೆ ನಾನು ಆಶಾವಾದಿಯೂ ಅಲ್ಲ, ನಿರಾಶಾವಾದಿಯೂ ಅಲ್ಲ’ ಎಂದರು.
‘ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಪುಸ್ತಕ, ಸೈಕಲ್ ವಿತರಣೆ ಯಾವುದೂ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಶಿಕ್ಷಣದ ಬಗ್ಗೆ ಕಾಳಜಿ ಇದ್ದವರಿಗೆ ಈ ಸ್ಥಾನ ನೀಡಿದರೆ ಎಲ್ಲ ಸರಿಪಡಿಸಬಹುದು. ಸಚಿನಾಗದಿದ್ದರೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ. ಆದರೆ, ಸಹಿ ಹಾಕುವ ಅಧಿಕಾರ ಮತ್ರ ಇಲ್ಲ. ಶಿಕ್ಷಣ ಕ್ಷೇತ್ರದ ಎಲ್ಲ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.