ADVERTISEMENT

ಶಾಲೆ ಆರಂಭ ಮುಂದೂಡಿ: ಹೊರಟ್ಟಿ ಪತ್ರ

​ಪ್ರಜಾವಾಣಿ ವಾರ್ತೆ
Published 5 ಮೇ 2022, 19:45 IST
Last Updated 5 ಮೇ 2022, 19:45 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ಕಡು ಬೇಸಿಗೆಯಲ್ಲಿ ಶಾಲೆಗಳನ್ನು ಪುನರಾರಂಭಿಸುವುದು ಸರಿಯಾದ ಕ್ರಮವಲ್ಲ. ಹೀಗಾಗಿ, ಜೂನ್ 1ರಿಂದ ಶಾಲೆ ಆರಂಭಿಸುವ ಬಗ್ಗೆ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.‌

ಹಿಂದೆಂದೂ ಕಂಡರಿಯದ ಬಿರು ಬಿಸಿಲಿನ ಬೇಗೆಯು ಈ ವರ್ಷ ದೇಶದಾದ್ಯಂತ ಇದೆ. ರಾಜ್ಯದಲ್ಲೂ ಕೂಡಾ ಬಿಸಿಲಿನ ಬೇಗೆಯಲ್ಲಿ ಜನ ಹಾಗೂ ಜಾನುವಾರುಗಳು ತೊಂದರೆ ಪಡುತ್ತಿರುವುದು ತಮಗೂ ಗೊತ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉರಿ
ಬಿಸಿಲು ಮಧ್ಯಾಹ್ನದ ಹೊತ್ತಿನಲ್ಲಿ ನೆತ್ತಿಯನ್ನು ಸುಡುತ್ತಲಿದೆ ಎಂದು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಇಂತಹ ಕಡು ಬೇಸಿಗೆಯಲ್ಲಿ ರಾಜ್ಯದಲ್ಲಿನ ಪ್ರಾಥಮಿಕ ಶಾಲೆಗಳನ್ನು ಮೇ 16 ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ಆದೇಶಿಸಿರುವುದು ಎಳೆಯ ಮಕ್ಕಳ ಪಾಲಕರಿಗೆ ನುಂಗಲಾರದ ತುತ್ತಾಗಿದೆ. ಆರಂಭಿಸಿದರೂ ಮಕ್ಕಳನ್ನು ಕಳುಹಿಸಲು ಪೋಷಕರು ಸಿದ್ಧರಿಲ್ಲ. ಶಾಲೆ ಆರಂಭವಾದರೆ ಉತ್ತರ ಭಾರತದಂತೆ ಮಕ್ಕಳು ಸನ್‌ ಸ್ಟ್ರೋಕ್‌ಗೆ ಒಳಗಾಗುವ ಸ್ಥಿತಿ ಇರುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಜೂನ್‌ 1ರಿಂದ ಆರಂಭಿಸುವಂತೆ ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

ರಜೆ ಅವಧಿ ವಿಸ್ತರಿಸಿದಲ್ಲಿ ಕಡಿಮೆ ಬೀಳುವ ಶೈಕ್ಷಣಿಕ ದಿನಗಳನ್ನು ಪ್ರತಿ ಶನಿವಾರ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಸರಿಪಡಿಸಬಹುದು ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.