ADVERTISEMENT

ಬೆಳಗಾವಿ ಗಡಿಯಲ್ಲಿ ಪರಿಸ್ಥಿತಿ ಗಮನಿಸಿ ನಿಷೇಧಾಜ್ಞೆ ನಿರ್ಧಾರ: ಎಡಿಜಿಪಿ ಅಲೋಕ್‌

ಉಭಯ ರಾಜ್ಯಗಳ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಅಲೋಕ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 4:01 IST
Last Updated 30 ನವೆಂಬರ್ 2022, 4:01 IST
ನಿಪ್ಪಾಣಿಯಲ್ಲಿ ಮಂಗಳವಾರ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದ ಪೊಲೀಸ್‌ ಅಧಿಕಾರಿಗಳ ಸಮನ್ವಯ ಸಭೆ ನಡೆಸಿದರು
ನಿಪ್ಪಾಣಿಯಲ್ಲಿ ಮಂಗಳವಾರ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದ ಪೊಲೀಸ್‌ ಅಧಿಕಾರಿಗಳ ಸಮನ್ವಯ ಸಭೆ ನಡೆಸಿದರು   

ನಿಪ್ಪಾಣಿ: ‘ಗಡಿ ವಿಚಾರವಾಗಿ ನಡೆದ ಬೆಳವಣಿಗೆಗಳ ಕಾರಣ ನಿಷೇಧಾಜ್ಞೆ ಜಾರಿ ಮಾಡುವಂಥ ಅವಶ್ಯಕತೆ ಇನ್ನೂ ಬಿದ್ದಿಲ್ಲ. ನ.30ರಂದು ಸುಪ್ರೀಂಕೋರ್ಟ್‌ನ ತೀರ್ಪು ಏನು ಬರುತ್ತದೋ ಅದನ್ನು ನೋಡಿಕೊಂಡು ನಿರ್ಧಾರ ಮಾಡಲಾಗುವುದು’ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ನಡೆದ ಅಂತರರಾಜ್ಯ ಗಡಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ‘ಯಾರಿಗಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸರೊಂದಿಗೆ ಚರ್ಚಿಸಿ. ಕಾನೂನು ಯಾರೂ ಮೀರಬೇಡಿ’ ಎಂದರು.

‘ಎರಡೂ ರಾಜ್ಯಗಳಲ್ಲಿ ಬಸ್‍ಗಳ ಮೇಲೆ ಮಸಿ ಬಳಸುವುದು, ಕಲ್ಲು ತೂರುವುದು ನಡೆದಿದೆ. ಸಾಂಗ್ಲಿಯಲ್ಲಿ ರಾಜ್ಯದ ಬಸ್ಸುಗಳಿಗೆ ಕಲ್ಲು ತೂರಿದ ಪ್ರಸಂಗ ಸೇರಿದಂತೆ ಮೂರು ಕಡೆ ಪ್ರಕರಣ ದಾಖಲಾಗಿವೆ. ಮಹಾರಾಷ್ಟ್ರ ಪೊಲೀಸರಿಗೆ ಮನವರಿಕೆ ಮಾಡಿದ್ದು ಭದ್ರತೆ ನೀಡುವಂತೆ ಹೇಳಲಾಗಿದೆ’ ಎಂದರು.

ADVERTISEMENT

ಉತ್ತರ ವಲಯ ಐಜಿಪಿ ಎನ್.ಸತೀಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಡಿಸಿಪಿಗಳಾದ ರವೀಂದ್ರ ಗದಾಡಿ, ಪಿ.ಸ್ನೇಹಾ, ಡಿವೈಎಸ್ಪಿಗಳು, ಸಿಪಿಐಗಳು, ಪಿಎಸ್‍ಐಗಳು ಇದ್ದರು.

ಮಹಾರಾಷ್ಟ್ರದ ಸಾವಂತವಾಡಿ ವಿಭಾಗದಿಂದ ಡಿವೈಎಸ್ಪಿ ಡಾ.ರೋಹಿನಿ ಸಾಳುಂಖೆ, ಸಿಪಿಐ ಭೋಸಲೆ, ಮೊದಲಾದ ಅಧಿಕಾರಿಗಳು ಇದ್ದರು.

ನಂತರ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಕೊಗನೋಳಿ ಚೆಕ್ ಪೋಸ್ಟ್‌ಗೆ ತೆರಳಿ ಪರಿಶೀಲನೆ ನಡೆಸಿದರು.ಮಹಾರಾಷ್ಟ್ರದಿಂದ ಬರುವ ಪ್ರವಾಸಿಗರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.