ADVERTISEMENT

ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನ: ಸ್ಮಶಾನದಲ್ಲಿ ಅಂತರ್ಜಾತಿ ವಿವಾಹ

ಮಾನವ ಬಂಧುತ್ವ ವೇದಿಕೆಯಿಂದ ದಿನವಿಡೀ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 4:17 IST
Last Updated 7 ಡಿಸೆಂಬರ್ 2018, 4:17 IST
ಸರಳ ವಿವಾಹದಲ್ಲಿ ಮಹಾರಾಷ್ಟ್ರ ಉಸ್ತರಿಮಠದ ವಿಶ್ವನಾಥ ಕೋರಣೇಶ್ವರ ಅಪ್ಪ ಸ್ವಾಮೀಜಿ, ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್, ಸತೀಶ ಜಾರಕಿಹೊಳಿ, ಬರಗೂರು ರಾಮಚಂದ್ರಪ್ಪ, ಮಾನವ ಬಂಧುತ್ವ ವೇದಿಕೆ ಸಂಚಾಲಕ ವಿಲ್ಫ್ರೆಡ್ ಡಿಸೋಜಾ ಇದ್ದರು
ಸರಳ ವಿವಾಹದಲ್ಲಿ ಮಹಾರಾಷ್ಟ್ರ ಉಸ್ತರಿಮಠದ ವಿಶ್ವನಾಥ ಕೋರಣೇಶ್ವರ ಅಪ್ಪ ಸ್ವಾಮೀಜಿ, ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್, ಸತೀಶ ಜಾರಕಿಹೊಳಿ, ಬರಗೂರು ರಾಮಚಂದ್ರಪ್ಪ, ಮಾನವ ಬಂಧುತ್ವ ವೇದಿಕೆ ಸಂಚಾಲಕ ವಿಲ್ಫ್ರೆಡ್ ಡಿಸೋಜಾ ಇದ್ದರು   

ಬೆಳಗಾವಿ: ‌ಡಾ.ಬಿ.ಆರ್. ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದ ಅಂಗವಾಗಿ ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಗುರುವಾರ ಆಯೋಜಿಸಿದ್ದ ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಪಾನ ಬಾಳಕೃಷ್ಣ ಜಾಂಬೋಟಿ– ರೇಖಾ ಹಿರೇಬಾಗೇವಾಡಿ ಜೋಡಿ ಕುವೆಂಪು ಮಂತ್ರಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮಹಾಪರಿನಿರ್ವಾಣ ದಿನದಂದು 2014ರಿಂದಲೂ ಸ್ಮಶಾನದಲ್ಲಿ ಸಾಮೂಹಿಕ ಭೋಜನ, ಚಿಂತನ–ಮಂಥನ ಹಾಗೂ ವಾಸ್ತವ್ಯ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ, ಅಂತರ್ಜಾತಿ ಸರಳ ವಿವಾಹ ಮಾಡಿಸಿದ್ದು ವಿಶೇಷವಾಗಿತ್ತು.

‘ಸ್ಮಶಾನದಲ್ಲಿ ಮದುವೆ ಮಾಡಿಸಿರುವುದು ದೇಶದಲ್ಲಿಯೇ‌ ಮೊದಲು. ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ಈ ಮೂಲಕ ನಾವು, ಮೌಢ್ಯತೆಯ ವಿರುದ್ಧ ದಾಪುಗಾಲು ಇಟ್ಟಿದ್ದೇವೆ’ ಎಂದು ಶಾಸಕ, ಕಾರ್ಯಕ್ರಮದ ರೂವಾರಿ ಸತೀಶ ಜಾರಕಿಹೊಳಿ ಹೇಳಿದರು.

ADVERTISEMENT

‘ಸ್ಮಶಾನದಲ್ಲಿ ಮದುವೆ ಮಾಡಿಕೊಳ್ಳುವವರಿಗೆ ₹ 2 ಲಕ್ಷ ಪ್ರೋತ್ಸಾಹಧನ ನೀಡಬೇಕು. ಇದನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿಯೇ ಘೋಷಿಸಬೇಕು. ಭಯಮುಕ್ತ ಸಮಾಜ ನಿರ್ಮಾಣಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು’ ಎಂದು ಒತ್ತಾಯಿಸಿದರು.

ನವದಂಪತಿಗೆ ವೈಯಕ್ತಿಕವಾಗಿ ₹ 50 ಸಾವಿರ ನೀಡಿದರು

ಚಿಂತಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ದೇಶದಲ್ಲಿ ವಿಚಾರದ ಹೆಸರಲ್ಲಿ ವಿಕಾರ ತುಂಬುವ ಕೆಲಸ ನಡೆಯುತ್ತಿದೆ’ ಎಂದು ವಿಷಾದಿಸಿದರು.

‘ಇದು ವಿವೇಕಾನಂದರ ಕಾಲವಲ್ಲ. ವಿವಾದಾನಂದರ, ವಿಕಾರಾನಂದರ ಕಾಲದಲ್ಲಿದ್ದೇವೆ. ವಿಚಾರಗಳನ್ನು ವಿಕಾರಗಳನ್ನಾಗಿ ಮಾಡಲಾಗುತ್ತಿದೆ. ಕೆಲವರು ವಿವೇಕಾನಂದರನ್ನು ಹೈಜಾಕ್ ಮಾಡಿದ್ದು, ಅವರನ್ನು ವಿಮೋಚನೆಗೊಳಿಸಬೇಕಾಗಿದೆ. ಮತಕ್ಕಾಗಿ ಅಪಹರಣಕ್ಕೆ ಒಳಗಾಗಿರುವ ಅಂಬೇಡ್ಕರ್‌ ಅವರನ್ನೂ ಬಿಡುಗಡೆ ಮಾಡಬೇಕಾಗಿದೆ’ ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮಾತನಾಡಿ, ‘ದೇಶದ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಸಂವಿಧಾನ ಕಾರಣ ಎಂದು ಕೆಲವರು ವಾದಿಸುತ್ತಿದ್ದಾರೆ. ಅದು ಸುಳ್ಳು. ದೋಷ ಇರುವುದು ಸಂವಿಧಾನದಲ್ಲಲ್ಲ; ಅದನ್ನು ಅನುಷ್ಠಾನಗೊಳಿಸುತ್ತಿರುವ ನಮ್ಮಲ್ಲಿ’ ಎಂದರು.

**

ಸ್ಮಶಾನದಲ್ಲಿ ಕಾರ್ಯಕ್ರಮ ಮಾಡಿದರೆ ಕೆಟ್ಟದಾಗುತ್ತದೆ ಎಂದು ಕೆಲವರು ಹೇಳಿದ್ದರು. ಆದರೆ, ನನಗೆ ಎಲ್ಲ ವಿಚಾರದಲ್ಲೂ ಲಾಭವೇ ಆಗಿದೆ
-ಸತೀಶ ಜಾರಕಿಹೊಳಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.