ADVERTISEMENT

ಕಾಲುವೆಯಲ್ಲಿ ತೇಲಿಬಂದ ಯುವಕನ ಶವ: 'ಸ್ನೇಹಿತನ ಕೊಲೆ' ಪ್ರಕರಣ ಭೇದಿಸಿದ ಪೊಲೀಸರು

ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 12:51 IST
Last Updated 29 ಜುಲೈ 2022, 12:51 IST
   

ಬೆಳಗಾವಿ: ಅಥಣಿ ತಾಲ್ಲೂಕಿನ ಯಂಕಂಚಿ ಗ್ರಾಮದ ಸರಹದ್ದಿನಲ್ಲಿ ಬರುವ ಕರಿಮಸೂತಿ ಕಾಲುವೆಯಲ್ಲಿ ಈಚೆಗೆ ಯುವಕನ ಶವ ಸಿಕ್ಕ ಪ್ರಕರಣವನ್ನುಐಗಳಿ ಪೊಲೀಸರು ಶುಕ್ರವಾರ ಭೇದಿಸಿದ್ದಾರೆ. ಯುವಕನ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಲಾಗಿದ್ದು, ಅವರಲ್ಲಿ ಕಾನೂನು ಸಂಘರ್ಷಕ್ಕೆ ಒಳಪಟ್ಟ ಒಬ್ಬ ಬಾಲಕ ಕೂಡ ಇದ್ದಾನೆ.

ವಿಠ್ಠಲ ತುಕಾರಾಮ ಬನ್ನೆಣ್ಣವರ (21) ಕೊಲೆಯಾದ ಯುವಕ. ಈತನ ಸ್ನೇಹಿತ ಸಂಕೇತ ಬಾಗಿ (19) ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಇನ್ನೊಬ್ಬ ಬಾಲಕ ಕೊಲೆ ಆರೋಪಿಗಳು. ಸಂಕೇತನನ್ನು ಬಂಧಿಸಲಾಗಿದ್ದು, ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ಕರಿಮಸೂತಿ ಏತನೀರಾವರಿಯ ಕಾಲುವೆಯಲ್ಲಿ ಜುಲೈ 24ರಂದು ಯುವಕನ ಶವ ತೇಲಿಬಂದಿತ್ತು. ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಗುಗವಾಡ ಮೂಲದ ವಿಠ್ಠಲಅವರ ಶವ ಎಂದು ಪೊಲೀಸರು ಪತ್ತೆ ಮಾಡಿದರು. ಇವರು ಕಾಗವಾಡ ತಾಲ್ಲೂಕಿನ ಉಗಾರ ಖುರ್ದ್‌ ಗ್ರಾಮದಲ್ಲಿ ಕೃಷಿ ಕಾರ್ಮಿಕ ಆಗಿದ್ದರು.

ADVERTISEMENT

ಶವದ ತಲೆ, ಮುಖದ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿದ ಗಾಯಗಳಾಗಿದ್ದವು. ಅದರ ಆಧಾರದ ಮೇಲೆ ಯುವಕನ ಕೊಲೆ ಆಗಿದೆ ಎಂದು ಪೊಲೀಸರು ತೀರ್ಮಾನಿಸಿದ್ದರು. ಮೂಲವನ್ನು ಹುಡುಕುತ್ತ ಹೋದಾಗ ಆತ ಮಹಾರಾಷ್ಟ್ರದವರು ಎಂದು ಗೊತ್ತಾಯಿತು. ಯುವಕನೊಂದಿಗೆ ಬಂದಿದ್ದ ಸ್ನೇಹಿತರನ್ನೂ ಹಿಡಿದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆಯಾದ ವಿಠ್ಠಲ ಹಾಗೂ ಆರೋಪಿ ಸಂಕೇತ ಬಹಳ ವರ್ಷಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಕೆಲ ತಿಂಗಳ ಹಿಂದೆ ಇಬ್ಬರ ಮಧ್ಯೆ ಫೋಟೊವೊಂದರ ವಿಚಾರವಾಗಿ ಇಬ್ಬರ ಮಧ್ಯೆಯೂ ವಿರಸ ಮೂಡಿತ್ತು. ಇದೇ ದ್ವೇಷದಿಂದ ಸಂಕೇತ ಹಾಗೂ ಬಾಲಕ ಸೇರಿಕೊಂಡು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮಾಹಿತಿ ನೀಡಿದರು.

ಡಿವೈಎಸ್ಪಿ ಶ್ರೀಪಾದ ಜಲ್ದೆ, ಇನ್‌ಸ್ಪೆಕ್ಟರ್‌ ಶಂಕರಗೌಡ, ಪಿಎಸ್‌ಐ ಪವಾರ್‌ ಹಾಗೂ ಐಗಳಿ ಪೊಲೀಸರ ತಂಡ ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ. ನಾಲ್ಕೇ ದಿನಗಳಲ್ಲಿ ಪ್ರಕರಣ ಭೇದಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪ್ರಯತ್ನ ಅಭಿನಂದನಾರ್ಹ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.