ADVERTISEMENT

Bengaluru Metro | ಚಿಕ್ಕಜಾಲಕ್ಕೆ ಮೆಟ್ರೊ ನಿಲ್ದಾಣ: ಪಿಐಎಲ್‌ ವಜಾ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
<div class="paragraphs"><p>ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೊ ನೀಲಿ ಮಾರ್ಗದ ಕಾಮಗಾರಿ ಅಂತಿಮ ಹಂತಕ್ಕೆ</p></div>

ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೊ ನೀಲಿ ಮಾರ್ಗದ ಕಾಮಗಾರಿ ಅಂತಿಮ ಹಂತಕ್ಕೆ

   

ಬೆಂಗಳೂರು: ‘ಚಿಕ್ಕಜಾಲ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಮೆಟ್ರೊ ರೈಲು ನಿಲ್ದಾಣ ನಿರ್ಮಾಣ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್​ಸಿಎಲ್​) ನಿರ್ದೇಶಿಸಬೇಕು’ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ಚಿಕ್ಕಜಾಲದ ನಿವಾಸಿಗಳಾದ ಸಿ.ಆರ್​.ನವೀನ್​ ಕುಮಾರ್ ಸೇರಿದಂತೆ ಏಳು ಜನರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ‘ಇಂತಹುದೇ ಸ್ಥಳದಲ್ಲಿ ಮೆಟ್ರೊ ರೈಲು ನಿಲ್ದಾಣ ನಿರ್ಮಾಣ ಮಾಡಬೇಕು ಎಂಬುದು  ನ್ಯಾಯಾಲಯದ ಪರಿಶೀಲನೆಗೆ ಹೊರತಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

‘ಮೆಟ್ರೊ ರೈಲು ಮಾರ್ಗ ಅದರ ಕುರಿತ ನಕ್ಷೆ ರಚಿಸುವುದು ಮತ್ತು ಯಾವ ಯಾವ ಭಾಗಗಳಲ್ಲಿ ನಿಲ್ದಾಣ ಬರಬೇಕು. ಎಷ್ಟು ನಿಲ್ದಾಣಗಳು ಇರಬೇಕು ಎಂಬ ಅಂಶಗಳನ್ನು ಮೆಟ್ರೊ ನಿಗಮದ ಅಧಿಕಾರಿಗಳು ನಿರ್ಧರಿಸುತ್ತಾರೆ. ಇಂತಹ ವಿಚಾರಗಳಲ್ಲಿ ನ್ಯಾಯಾಲಯ ತೀರ್ಮಾನ ಪ್ರಕಟಿಸಲು ಅವಕಾಶವಿಲ್ಲ. ಈ ವಿಚಾರವನ್ನು ಮೆಟ್ರೊ ಪ್ರಾಧಿಕಾರವೇ ತೀರ್ಮಾನ ಮಾಡಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ಕೆ.ಆರ್​.ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ‘ನಮ್ಮ ಮೆಟ್ರೊ–2ಬಿ’ ಹಂತದ ನೀಲಿ ಮಾರ್ಗದ ಚಿಕ್ಕಜಾಲದಲ್ಲಿ ಮೆಟ್ರೊ ರೈಲು ನಿಲ್ದಾಣ ನಿರ್ಮಾಣ ಮಾಡಬೇಕು ಎಂದು 2023-24ರಲ್ಲಿ ನಿರ್ಧರಿಸಲಾಗಿತ್ತು. ಆದರೆ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾವವನ್ನು ಕೈ ಬಿಡಲಾಗಿದ್ದು ಯಾವ ಕಾರಣಕ್ಕಾಗಿ ಎಂಬುದನ್ನು ತಿಳಿಸಿಲ್ಲ. ಆದ್ದರಿಂದ ಈ ಹಿಂದೆ ಕೈಗೊಂಡಿದ್ದ ನಿರ್ಧಾರಂತೆ ಚಿಕ್ಕಜಾಲದಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣ ಮಾಡುವಂತೆ ಬಿಎಂಆರ್​ಸಿಎಲ್​ಗೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.