ADVERTISEMENT

Bengaluru-Mysuru Expressway: ಅಪಘಾತ ಹೆಚ್ಚಳ– ರಸ್ತೆ ಸುರಕ್ಷತಾ ತಜ್ಞರಿಂದ ಪರಿಶೀಲನೆ

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 20:19 IST
Last Updated 18 ಜುಲೈ 2023, 20:19 IST
   

ನವದೆಹಲಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿಯ ಸುರಕ್ಷತಾ ಪರಿಶೀಲನೆಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ಸುರಕ್ಷತಾ ತಜ್ಞರ ಸಮಿತಿ ರಚಿಸಿದೆ.

‘ಸುರಕ್ಷಿತ ಪ್ರಯಾಣ ಉತ್ತೇಜಿಸುವ ಮೂಲಕ ಕರ್ನಾಟಕದ ಜನರಿಗೆ ಕಾರಿಡಾರ್‌ನ ಸೇವೆಯನ್ನು ಖಚಿತಪಡಿಸುವುದು ಈ ಸಮಿತಿ ರಚನೆಯ ಉದ್ದೇಶ. ಸಮಿತಿಯು ಪ್ರಸ್ತುತ ಹೆದ್ದಾರಿ ಪ್ರವಾಸದಲ್ಲಿದ್ದು, ಜುಲೈ 20ರೊಳಗೆ ಅಧ್ಯಯನ ಪೂರ್ಣಗೊಳಿಸಲಿದೆ. ಬಳಿಕ ಸಮಿತಿಯು ವರದಿಯನ್ನು 10 ದಿನಗಳಲ್ಲಿ ಸಲ್ಲಿಸಲಿದೆ’ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ. 

118 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ವೇಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಹೆದ್ದಾರಿಯು ವಾಣಿಜ್ಯ ಚಟುವಟಿಕೆ ಉತ್ತೇಜಿಸುತ್ತಿದೆ ಮತ್ತು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಹೆದ್ದಾರಿಯು ಕರ್ನಾಟಕದ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 75 ನಿಮಿಷಗಳಿಗೆ ಇಳಿಸಿದೆ ಎಂದು ಸಚಿವಾಲಯ ಹೇಳಿದೆ. 

ADVERTISEMENT

ಈ ಕಾರಿಡಾರ್‌ನಲ್ಲಿ 4 ರೈಲು ಮೇಲ್ಸೇತುವೆಗಳು, 9 ಪ್ರಮುಖ ಸೇತುವೆಗಳು, 40 ಸಣ್ಣ ಸೇತುವೆಗಳು, 89 ಅಂಡರ್‌ಪಾಸ್‌ಗಳು ಇವೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ  ಬೈಪಾಸ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.