
ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ರೈಲು ಪ್ರಯಾಣಿಕರನ್ನು ಪರಿಚಯಿಸಿಕೊಂಡು ಟೀ ಹಾಗೂ ಜ್ಯೂಸ್ನಲ್ಲಿ ಮತ್ತುಬರುವ ಔಷಧ ಬೆರೆಸಿ ಕೊಟ್ಟು ಪ್ರಜ್ಞೆ ತಪ್ಪಿದ ಬಳಿಕ ಕಳ್ಳತನ ಮಾಡುತ್ತಿದ್ದ ಬಿಹಾರದ ಇಬ್ಬರನ್ನು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಸಫಾರ್ ಹಾಗೂ ಸತರ್ಮ್ ಬಂಧಿತರು.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿಹಾರದ ಕೃಷ್ಣಕುಮಾರ್ ಅವರಿಗೆ ಮತ್ತುಬರುವ ಔಷಧ ನೀಡಿ ಅವರ ಬ್ಯಾಗ್, ಮೊಬೈಲ್ ಹಾಗೂ ನಗದು ಕಳ್ಳತನ ಮಾಡಿಕೊಂಡು ಆರೋಪಿಗಳು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.
ಕುಮಾರ್ ಅವರು ನಗರದಿಂದ ಪಟ್ನಾದ ದಾನಾಪುರಕ್ಕೆ ಪ್ರಯಾಣಿಸಲು ರೈಲು ಹತ್ತಿದ್ದರು. ಪಕ್ಕದಲ್ಲೇ ಬಂದು ಕುಳಿತ್ತಿದ್ದ ಆರೋಪಿಗಳು ‘ನಾವೂ ಬಿಹಾರದವರು’ ಎಂಬುದಾಗಿ ಪರಿಚಯಿಸಿಕೊಂಡಿದ್ದರು. ಸ್ವಲ್ಪ ಹೊತ್ತಿನ ಬಳಿಕ ‘ಟೀ ಕುಡಿಯೋಣ’ ಎಂದು ಕೇಳಿದ್ದರು. ಕುಮಾರ ಅವರೂ ಒಪ್ಪಿದ್ದರು.
ಆರೋಪಿಗಳ ಪೈಕಿ ಒಬ್ಬಾತ ರೈಲಿನಿಂದ ಕೆಳಕ್ಕೆ ಇಳಿದು ಹೋಗಿ ಮತ್ತುಬರುವ ಔಷಧ ಬೆರೆಸಿದ್ದ ಟೀತಂದು ಕೊಟ್ಟಿದ್ದ. ಟೀ ಕುಡಿದ ಮೇಲೆ ಕುಮಾರ್ ಅವರು ಪ್ರಜ್ಞೆ ತಪ್ಪಿದ್ದರು. ಆಗ, ₹ 4 ಸಾವಿರ ನಗದು, ಬ್ಯಾಗ್ ಹಾಗೂ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದರು ಎಂದು ರೈಲ್ವೆ ಪೊಲೀಸರುಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.