ADVERTISEMENT

ತುಮಕೂರಿಗೆ ಮೆಟ್ರೊದಿಂದ ಬೆಂಗಳೂರಿನ ಒತ್ತಡ ಕಡಿಮೆ: ಗೃಹ ಸಚಿವ ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 16:09 IST
Last Updated 18 ನವೆಂಬರ್ 2025, 16:09 IST
   

ಬೆಂಗಳೂರು: ‘ಬೆಂಗಳೂರು- ತುಮಕೂರು ಮೆಟ್ರೊ ಯೋಜನೆಯ ಅನೇಕ ವಿಚಾರಗಳು ಸಂಸದ ತೇಜಸ್ವಿಸೂರ್ಯ ಅವರ ಗಮನದಲ್ಲಿಲ್ಲ. ಇದೇ ಕಾರಣದಿಂದ ಈ ಯೋಜನೆಯ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತುಮಕೂರಿನಿಂದ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ನೆಲಮಂಗಲ, ದಾಬಸ್‌ಪೇಟೆ, ಕ್ಯಾತ್ಸಂದ್ರ ಭಾಗ ವೇಗವಾಗಿ ಬೆಳೆಯುತ್ತಿದೆ. ರಾಮನಗರ, ಕೋಲಾರ, ತುಮಕೂರು ನಗರಗಳನ್ನು ಬೆಳೆಸುವ ಜೊತೆಗೆ, ರಸ್ತೆ, ಮೆಟ್ರೊ, ರೈಲು ಸಂಪರ್ಕ ಇದ್ದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂಬುದು ನಮ್ಮ ಉದ್ದೇಶ’ ಎಂದರು.

‘ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಿಸಲಾಗಿದೆ. ಈಗಾಗಲೇ 200 ಕೈಗಾರಿಕೆಗಳು ಬಂದಿವೆ. ಫುಡ್‌ಪಾರ್ಕ್, ಟೈಮೆಕ್ ಜಪಾನೀಸ್ ಫ್ಯಾಕ್ಟರಿ, ಜಪಾನೀಸ್ ಟೌನ್‌ಶಿಪ್‌ಗೆ ಜಾಗ ಕೊಟ್ಟಿದ್ದೇವೆ. ಇಷ್ಟು ವೇಗವಾಗಿ ಬೆಳೆಯುತ್ತಿರುವಾಗ ಸಂಪರ್ಕ ವ್ಯವಸ್ಥೆ ಬೇಕಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಮೆಟ್ರೊ ಯೋಜನೆಯನ್ನು ತುಮಕೂರಿಗೆ ತೆಗೆದುಕೊಂಡು ಹೋಗಬೇಕೆಂದು ಎರಡು ವರ್ಷದ ಹಿಂದೆಯೇ ಪ್ರಸ್ತಾಪ ಮಾಡಿದ್ದೆ. ಕಾರ್ಯಸಾಧ್ಯತೆ ಅಧ್ಯಯನ ಮಾಡಿಸುವುದಾಗಿ 2024ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು. ಈ ಅಧ್ಯಯನ ವರದಿಯಲ್ಲಿ ತುಮಕೂರು ಮೆಟ್ರೊ ಯೋಜನೆ ಬಗ್ಗೆ ಸಕಾರಾತ್ಮಕ ಅಭಿಪ್ರಾಯವಿದೆ. ಎಲ್ಲರೊಂದಿಗೆ ಚರ್ಚಿಸಿ, ಡಿಪಿಆರ್ ಮಾಡಲು ಅವರು ಅನುಮತಿ ನೀಡಿದ್ದಾರೆ’ ಎಂದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.