ADVERTISEMENT

ಅಂತರ್ಜಲ ಕಲುಷಿತಗೊಳಿಸುತ್ತಿರುವ ಸಕ್ಕರೆ ಕಾರ್ಖಾನೆಗಳು: ರಾಜು ಕಾಗೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 20:31 IST
Last Updated 14 ಜುಲೈ 2023, 20:31 IST
   

ಬೆಂಗಳೂರು: ‘ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಕಾಕಂಬಿ ಮತ್ತು ಇತರ ತ್ಯಾಜ್ಯಗಳನ್ನು ನೇರವಾಗಿ ನದಿ, ಹಳ್ಳಗಳಿಗೆ ಬಿಡುತ್ತಿರುವ ಪರಿಣಾಮ ಅಂತರ್ಜಲ ಕಲುಷಿತಗೊಂಡಿದೆ. ಸರ್ಕಾರ ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಕಾಂಗ್ರೆಸ್‌ನ ಭರಮಗೌಡ ಅಲಗೌಡ (ರಾಜು) ಕಾಗೆ ಒತ್ತಾಯಿಸಿದರು.

ಅಲ್ಲದೇ, ಕಾರ್ಖಾನೆಗಳು ತೂಕದಲ್ಲೂ ಮೋಸ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ಅವರು ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ, ‘ಈ ಸಂಬಂಧ ಈಗಾಗಲೇ ಉಗಾರ್‌ ಶುಗರ್ಸ್‌ ಮತ್ತು ಅಥಣಿ ಶುಗರ್ಸ್ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸರಿಯಾಗಿ ಕಣ್ಣಿಟ್ಟು, ತಪಾಸಣೆ ಮಾಡದಿರುವುದೇ ಅಂತರ್ಜಲ ಕಲುಷಿತವಾಗಲು ಮುಖ್ಯ ಕಾರಣ’ ಎಂದರು.

ADVERTISEMENT

‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದಕ್ಕಾಗಿ ಪ್ರತ್ಯೇಕ ವಿಭಾಗವನ್ನು ತೆರೆಯಬೇಕಾಗುತ್ತದೆ. ಈ ಸಂಬಂಧ ಅವರಿಗೆ ಸಲಹೆ ನೀಡಲಾಗಿದೆ. ತೂಕದಲ್ಲಿ ಮೋಸವನ್ನು ತಡೆಗಟ್ಟಲು ಸರ್ಕಾರವೇ ತೂಕದ ಯಂತ್ರವನ್ನು ಅಳವಡಿಸಲು ಉದ್ದೇಶಿಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.