ತುಮಕೂರು: ಕಾಂಗ್ರೆಸಿಗರು ಅಧಿಕಾರ ಕಳೆದುಕೊಂಡ ಮೇಲೆ ಭಾರತ್ ಜೋಡೊ ಯಾತ್ರೆ ಮಾಡಲು ಹೊರಟಿದ್ದಾರೆ. ಅಧಿಕಾರದಲ್ಲಿದ್ದಾಗ ಜೋಡಿಸುವಂತಹ ಯಾವ ಕೆಲಸ ಮಾಡಿದ್ದಾರೆ. ಬರಿ ವಿಂಗಡಣೆ ಮಾಡುವುದಷ್ಟೇ ಅವರ ಕೆಲಸ ಎಂದು ಗೃಹ ಸಚಿವ ಆಗರ ಜ್ಞಾನೇಂದ್ರ ಅವರು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಭಾರತ್ ಜೋಡೊ ಯಾತ್ರೆಯಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸ್ವಾತಂತ್ರ್ಯ ಬಂದಾಗ ದೇಶ ವಿಭಜಿಸಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಗಾಂಧೀಜಿ ತಡೆದರೂ ಅದಕ್ಕೆ ಬೆಲೆ ಕೊಡದೆ ಪಾಕಿಸ್ತಾನ ಮಾಡಿದರು. ನಂತರ ಹಳ್ಳಿ ಹಳ್ಳಿಯಲ್ಲೂ ಮತೀಯ ಶಕ್ತಿಗಳನ್ನು ಬೆಳೆಸುತ್ತಿದ್ದಾರೆ’ ಎಂದು ಆರೋಪಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪಿಎಫ್ಐ ನಿಷೇಧಿಸಿದ್ದು ಇಷ್ಟವಿದ್ದಂತೆ ಕಾಣುತ್ತಿಲ್ಲ. ಅವರಿಗೆ ದೇಶದ ಹಿತಕ್ಕಿಂತ ವೋಟ್ಗಳ ಹಿತದೃಷ್ಟಿ ಮುಖ್ಯವಾಗಿದೆ. ಮುಂದೆ ಚುನಾವಣೆ ಬರಲಿದ್ದು, ವೋಟ್ ಬ್ಯಾಂಕ್ಗೆ ಹಾನಿಯಾಗದಂತೆ ನೋಡಿಕೊಂಡು ಮಾತನಾಡುತ್ತಿದ್ದಾರೆ. ಪಿಎಫ್ಐ ನಿಷೇಧಿಸುವ ಬದಲು ಆರ್ಎಸ್ಎಸ್ ಯಾಕೆ ನಿಷೇಧ ಮಾಡಿಲ್ಲ ಎನ್ನುವ ರೀತಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಾದ್ಯಂತ ಈವರೆಗೆ 110 ಪಿಎಫ್ಐ ಮುಖಂಡರನ್ನು ಬಂಧಿಸಲಾಗಿದೆ. 42 ಕಡೆಗಳಲ್ಲಿ ಪಿಎಫ್ಐ ಕಚೇರಿಗಳಿಗೆ ಬೀಗ ಹಾಕಲಾಗಿದ್ದು, ಲ್ಯಾಪ್ಟಾಪ್ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳದಲ್ಲಿ ತರಬೇತಿ ನೀಡಲು ಬಳಸುತ್ತಿದ್ದ ಪಿಎಫ್ಐ ಕಚೇರಿಯನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.