ADVERTISEMENT

ಭೋವಿ ಅಭಿವೃದ್ಧಿ ನಿಗಮಕ್ಕೆ ₹2 ಸಾವಿರ ಕೋಟಿ ಅನುದಾನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 17:54 IST
Last Updated 27 ಡಿಸೆಂಬರ್ 2021, 17:54 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭೋವಿ ಸಮುದಾಯದ ವಿವಿಧ ಸಂಘಟನೆಗಳ ಸದಸ್ಯರು ಸೋಮವಾರ ಧರಣಿ ನಡೆಸಿದರು –ಪ್ರಜಾವಾಣಿ ಚಿತ್ರ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭೋವಿ ಸಮುದಾಯದ ವಿವಿಧ ಸಂಘಟನೆಗಳ ಸದಸ್ಯರು ಸೋಮವಾರ ಧರಣಿ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮಕ್ಕೆ ₹2 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ (ಕ್ರಾಂತಿ) ನೇತೃತ್ವದಲ್ಲಿ ಸೋಮವಾರ ಧರಣಿ ನಡೆಸಲಾಯಿತು.

ಅಖಿಲ ಕರ್ನಾಟಕ ಭೋವಿ ಕಲ್ಲು–ಬಂಡೆ–ಮಣ್ಣು ಮತ್ತು ಕಟ್ಟಡ ಕಾರ್ಮಿಕ ವೇದಿಕೆ ಹಾಗೂ ಕಲ್ಲು–ಬಂಡೆ ಕುಟ್ಟಿಕಾರರ ಹೋರಾಟ ಸಮಿತಿಯ ಸದಸ್ಯರೂ ಧರಣಿಯಲ್ಲಿ ಭಾಗವಹಿಸಿದ್ದರು.

‘ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮಗಳಾಗಿವೆ. ಅನುದಾನವನ್ನೂ ದುರ್ಬಳಕೆ ಮಾಡಲಾಗಿದೆ. 2017ರಿಂದ ಈವರೆಗೂ ನಡೆದಿರುವ ಅವ್ಯವಹಾರದ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಬೇಕು. ಭ್ರಷ್ಟ ಅಧಿಕಾರಿಗಳು ಹಾಗೂ ದಲ್ಲಾಳಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು’ ಎಂದು ಧರಣಿ ನಿರತರು ಒತ್ತಾಯಿಸಿದರು.

ADVERTISEMENT

‘ಗಣಿಗಾರಿಕೆ, ಅರಣ್ಯ ಹಾಗೂ ಪರಿಸರ ಸಂರಕ್ಷಣೆಯ ನೆಪವೊಡ್ಡಿ ಸಮುದಾಯದ ಕುಲಕಸುಬನ್ನೇ ನಿರ್ಬಂಧಿಸಲಾಗಿದೆ. ಹೀಗಾಗಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಕಲ್ಲು–ಬಂಡೆ ಒಡೆದು ಜೀವನ ಸಾಗಿಸುತ್ತಿದ್ದ ಬಡವರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಿಂದ ಅವರು ವರ್ಷಗಟ್ಟಲೇ ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. ಹೀಗಾಗಿ ಪ್ರಕರಣಗಳನ್ನೆಲ್ಲಾ ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಸೈಜು ಕಲ್ಲು ಸಿದ್ಧಪಡಿಸುವ ಹಾಗೂ ಬಂಡೆ ಒಡೆಯುವುದಕ್ಕೆ ಸಂಬಂಧಿಸಿದ ನೇರ ಗುತ್ತಿಗೆಯನ್ನು ಭೋವಿ ಜನಾಂಗದವರಿಗೇ ಮಂಜೂರಾತಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ವಿಧಾನಸೌಧದ ಮುಂಭಾಗದಲ್ಲಿ ಭೋವಿ ಸಮುದಾಯದ ಆದಿಗುರು ಸಿದ್ಧರಾಮೇಶ್ವರರ ಕಂಚಿನ ಪುತ್ಥಳಿ ನಿರ್ಮಿಸಬೇಕು. ಸ್ವಾತಂತ್ರ್ಯ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ಹೆಸರಿನಲ್ಲಿ ಪ್ರಾಧಿಕಾರ ರಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅವೈಜ್ಞಾನಿಕ ಹಾಗೂ ಸಂವಿಧಾನ ಬಾಹಿರವಾಗಿರುವ ನ್ಯಾ.ಸದಾಶಿವ ಆಯೋಗದ ವರದಿಯನ್ನು ರದ್ದುಪಡಿಸಬೇಕು. ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ಕೂಡಲೇ ನೇಮಕ ಮಾಡಬೇಕು’ ಎಂದುಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ವೈ.ಕೊಟ್ರೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.