ಬೆಂಗಳೂರು: ಬಾಲ್ಯ ವಿವಾಹ ತಡೆಯಬೇಕಿದ್ದ ಸರ್ಕಾರವೇ ಅದನ್ನು ಪ್ರೋತ್ಸಾಹಿಸಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಪ್ರಾಪ್ತರ ವಿವಾಹಕ್ಕೆ ಆರ್ಥಿಕ ನೆರವು ನೀಡುವ ಮೂಲಕ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ ವರದಿ ಬೊಟ್ಟುಮಾಡಿ ತೋರಿಸಿದೆ.
ಅಲ್ಪಸಂಖ್ಯಾತರ ಸಮುದಾಯದ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಹಣಕಾಸಿನ ನೆರವು ನೀಡುವ ಸಲುವಾಗಿ ಸರ್ಕಾರ ‘ಬಿದಾಯಿ’ ಯೋಜನೆ ರೂಪಿಸಿದ್ದು, ₹50 ಸಾವಿರ ನೆರವು ನೀಡಲಾಗುತ್ತಿದೆ. ವಿವಾಹದ ದಿನದಂದು ಯುವಕರಿಗೆ 21 ವರ್ಷ ಹಾಗೂ ಯುವತಿಯರಿಗೆ 18 ವರ್ಷ ತುಂಬಿರಬೇಕು ಎಂಬುದು ನಿಯಮ. ಆದರೆ ಬೆಂಗಳೂರು ನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 59 ಯುವತಿಯರು ಹಾಗೂ 10 ಯುವಕರ ವಯಸ್ಸು ನಿಗದಿಗಿಂತ ಕಡಿಮೆ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಯೋಜನೆಯ ಷರತ್ತಿನ ಅನ್ವಯ ಅಪ್ರಾಪ್ತರಿಗೆ ಹಣಕಾಸಿನ ನೆರವು ನೀಡುವಂತಿಲ್ಲ. ಬಾಲ್ಯ ವಿವಾಹ ನಿಷೇಧಿಸಿದ್ದರೂ ಇಲಾಖೆ ಅಧಿಕಾರಿಗಳು ಅಪ್ರಾಪ್ತರಿಗೆ ಹಣ ಬಿಡುಗಡೆ ಮಾಡುವ ಮೂಲಕ ಲೋಪವೆಸಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಾರ್ಷಿಕ ವರಮಾನ, ಜಾತಿ ಪ್ರಮಾಣಪತ್ರ, ಜನ್ಮ ದಿನಾಂಕದ ನಕಲಿ ಪ್ರಮಾಣ ಪತ್ರಗಳನ್ನು ನೀಡಿ ಹಣ ಪಡೆದು ವಂಚಿಸಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಬೆಂಗಳೂರು ಉತ್ತರ, ದಕ್ಷಿಣ, ಯಲಹಂಕ ತಹಶೀಲ್ದಾರ್ ಕಚೇರಿ ವ್ಯಾಪ್ತಿಯಲ್ಲಿ 31 ಮಂದಿ
ನಕಲಿ ದಾಖಲೆ ನೀಡಿ ಹಣ ಪಡೆದುಕೊಂಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಈ ಬಗ್ಗೆ ಎಲ್ಲ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸುವಂತೆ ಸಲಹೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.