ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಅವರ ಸಹೋದರ ಸುದರ್ಶನ್ ರಮೇಶ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹೊರಡಿಸಿದ್ದ ಲುಕ್ ಔಟ್ ಸುತ್ತೋಲೆಯನ್ನು (ಎಲ್ಒಸಿ) ಹೈಕೋರ್ಟ್ ರದ್ದುಪಡಿಸಿದೆ.
ಎಲ್ಒಸಿ ರದ್ದುಪಡಿಸುವಂತೆ ಕೋರಿ ಸುದರ್ಶನ್ ರಮೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ತನಿಖೆಯ ವೇಳೆ ಆಕ್ಷೇಪಾರ್ಹ ವಿಚಾರಗಳು ಕಂಡುಬಂದಲ್ಲಿ ಇ.ಡಿ ಸಮನ್ಸ್ ನೀಡಿದರೆ ಅರ್ಜಿದಾರರು ಹಾಜರಾಗಬೇಕು. ತಮ್ಮ ಇ–ಮೇಲ್ ಐಡಿ, ಸಂಪರ್ಕ ವಿವರ ಮತ್ತು ಶಾಶ್ವತ ವಿಳಾಸವನ್ನು ನೀಡಬೇಕು‘ ಎಂದು ನ್ಯಾಯಪೀಠ ಅರ್ಜಿದಾರರಿಗೆ ತಾಕೀತು ಮಾಡಿದೆ.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಡೆಪ್ಯುಟಿ ಸಾಲಿಸಿಟರ್ ಜನರಲ್, ‘ಅರ್ಜಿದಾರರ ಸಹೋದರನ ವಿರುದ್ಧ ಗಂಭೀರ ಆರೋಪವಿದೆ. ಈ ಕಾರಣಕ್ಕಾಗಿ ಎಲ್ಒಸಿ ಹೊರಡಿಸಲಾಗಿದೆ. ಒಂದು ವೇಳೆ ಈ ಸುತ್ತೋಲೆಯನ್ನು ಹಿಂಪಡೆದಲ್ಲಿ ಅರ್ಜಿದಾರರು ವಿದೇಶಕ್ಕೆ ತೆರಳಲಿದ್ದು, ತನಿಖೆಗೆ ಸಹಕರಿಸದೇ ಇರಬಹುದು. ಹೀಗಾಗಿ ಎಲ್ಒಸಿ ರದ್ದು ಮಾಡಲಾಗದು‘ ಎಂದು ಪ್ರತಿಪಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.