ಬೆಂಗಳೂರು: ‘ಬಿಟ್ ಕಾಯಿನ್ ಹಗರಣದ ತನಿಖೆಗಾಗಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಬರೆದಿರುವ ಪತ್ರವನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ಪ್ರಕರಣದ ಕುರಿತು ಆರೋಪಪಟ್ಟಿ ಸಲ್ಲಿಸಿರುವು
ದಾಗಿ ರಾಜ್ಯ ಸರ್ಕಾರ ಹೇಳಿದೆ. ಆರೋಪ ಪಟ್ಟಿ ಸಲ್ಲಿಸಿದ್ದರೆ, ತನಿಖೆಯನ್ನು ಇ.ಡಿಗೆ ನೀಡುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದರು.
‘ಈ ಪ್ರಕರಣವನ್ನು ಇ.ಡಿ ತನಿಖೆಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಾಗೆ ಹೇಳಿದ ಮಾತ್ರಕ್ಕೆ ನಂಬಲು ಸಾಧ್ಯವಿಲ್ಲ. ತನಿಖೆಯನ್ನು ಹಿಂದೆ ಯಾವ ಸಂಸ್ಥೆ ಮಾಡಿತ್ತು, ಯಾರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು, ಎಷ್ಟು ಜನರನ್ನು ಬಂಧಿಸಲಾಗಿದೆ, ತನಿಖೆ ಮಾಡಿದ ಅಧಿಕಾರಿಗಳು ಯಾರು? ತನಿಖೆಯಲ್ಲಿ ಸಿಕ್ಕ ಮಾಹಿತಿಗಳೇನು? ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ದಾಖಲೆಗಳನ್ನು ಬಿಡುಗಡೆ ಮಾಡಲಿ’ ಎಂದು ಒತ್ತಾಯಿಸಿದರು.
‘ಬಿಟ್ ಕಾಯಿನ್ ಅಂದರೆ ಏನು, ಇದರ ಮಾಲೀಕರು ಯಾರು, ಯಾವ ಕಾಯ್ದೆ, ಸೆಕ್ಷನ್ ಅಡಿ ತನಿಖಾ ಸಂಸ್ಥೆಗೆ ಪ್ರಕರಣವನ್ನು ನೀಡಲಾಗಿದೆ ಎಂಬ ಮಾಹಿತಿ ನೀಡಲಿ. ಪ್ರಕರಣದ ಬಗ್ಗೆ ಆರೋಪಪಟ್ಟಿ ಸಲ್ಲಿಸಿದ ನಂತರ ಇ.ಡಿಗೆ ಯಾಕೆ ಹೋಗಬೇಕು ಎಂಬ ಬಗ್ಗೆ ಜನರಿಗೆ ಸ್ಪಷ್ಟಚಿತ್ರಣ ನೀಡಬೇಕು’ ಎಂದರು.
‘2018ರಲ್ಲಿ ಈ ಪ್ರಕರಣ ದಾಖ ಲಾಗಿದ್ದು, ಆಗ ಶಿವಕುಮಾರ್ ಅವರು ಯಾವ ಸಚಿವರಾಗಿದ್ದರು’ ಎಂದು ಬಿಜೆಪಿ ನಾಯಕರು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ನನ್ನ ಹೆಸರನ್ನೂ ಸೇರಿಸಿ ತನಿಖೆಗೆ ಆದೇಶಿಸಲಿ’ ಎಂದರು.
ಮತದಾರರ ಉತ್ತರ: ‘ಕಾಂಗ್ರೆಸ್ ಮುಳುಗಿದ ಹಡಗು, ಇಬ್ಭಾಗ ಆಗಿದೆ ಎಂದು ವ್ಯಾಖ್ಯಾನಿಸುವವರಿಗೆ ಉಪ ಚುನಾವಣೆಯಲ್ಲಿ ಮತದಾರರು ಉತ್ತರ ನೀಡಿದ್ದಾನೆ. ಹಾನಗಲ್ ಕ್ಷೇತ್ರದಲ್ಲಿ ನನ್ನ ಗೆಲುವಲ್ಲ. ಮತದಾರರು ಹಾಗೂ ಪಕ್ಷದ ಕಾರ್ಯಕರ್ತರ ಗೆಲುವು. ಬಿಜೆಪಿ ಆಡಳಿತ ವಿರುದ್ಧ ಮತದಾರ ನೀಡಿದ ತೀರ್ಪು. ಯಾರು ಜನರ ಮಧ್ಯೆ ಇರುತ್ತಾರೋ, ಕಷ್ಟಕಾಲದಲ್ಲಿ ಭಾಗಿಯಾಗುತ್ತಾರೊ ಅವರಿಗೆ ಮತದಾರ ಆಶೀರ್ವದಿಸುತ್ತಾನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.