ADVERTISEMENT

ಸ್ವಸಹಾಯ ಸಂಘಗಳ ಮೇಲೆ ಬಿಜೆಪಿ ಕಣ್ಣು

ಲೋಕಸಭಾ ಚುನಾವಣೆ: ರಾಮ್‌ಲಾಲ್‌ ಸರಣಿ ಸಭೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 19:21 IST
Last Updated 5 ಫೆಬ್ರುವರಿ 2019, 19:21 IST

ಬೆಂಗಳೂರು: ಸ್ವಸಹಾಯ ಸಂಘಗಳ 2–3 ಸದಸ್ಯರ ಜತೆಗೆ ಸಂಪರ್ಕದಲ್ಲಿರಬೇಕು ಹಾಗೂ ಅವರನ್ನು ಪಕ್ಷದ ಸದಸ್ಯರನ್ನಾಗಿ ಮಾಡಬೇಕು. ಪ್ರತಿ ಬೂತ್‌ನಿಂದ 20 ಹೊಸ ಸದಸ್ಯರ ನೋಂದಣಿ ಮಾಡಬೇಕು. ಪ್ರತಿ ಮತಗಟ್ಟೆಯಲ್ಲಿ ಸ್ಮಾರ್ಟ್‌ ಫೋನ್ ಹೊಂದಿರುವವರ ಪಟ್ಟಿ ಸಿದ್ಧಪಡಿಸಬೇಕು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್‌ ಅವರು ಪಕ್ಷದ ಮುಖಂಡರಿಗೆ ನೀಡಿರುವ ಸೂಚನೆ ಇದು. ಲೋಕಸಭಾ ಚುನಾವಣೆಯ ಸಿದ್ಧತೆ ಅಂಗವಾಗಿ ಅವರು ಮಂಗಳವಾರ ಸರಣಿ ಸಭೆಗಳನ್ನು ನಡೆಸಿದರು. ‘ಎಲ್ಲ ಕೆಲಸಗಳನ್ನು ಬದಿಗೊತ್ತಿ ಚುನಾವಣೆಗೆ ಸಜ್ಜಾಗಿ’ ಎಂದೂ ಸೂಚಿಸಿದರು. ವರಿಷ್ಠರು ನೀಡಿರುವ 23 ಅಂಶಗಳ ಕಾರ್ಯಕ್ರಮ ಅನುಷ್ಠಾನ ಮಾಡಿದರೆ ‘ಮಿಷನ್‌–22’ ಗುರಿ ತಲುಪಬಹುದು ಎಂದರು.

ಪಕ್ಷದ ಮಂಡಲ ಸ್ತರದ ಮುಖಂಡರು– ಮೋರ್ಚಾ ಪದಾಧಿಕಾರಿಗಳಿಗೆ 5 ಮತಗಟ್ಟೆಗಳ ಜವಾಬ್ದಾರಿ ನೀಡಬೇಕು. ಬೂತ್‌ಗಳ ಸಾಮಾಜಿಕ ರಚನೆಗೆ ಅನುಗುಣವಾಗಿ ಬೂತ್ ಸಮಿತಿ ರಚಿಸಬೇಕು. ಬೂತ್‌ನಲ್ಲಿ ಆರು ಕಡ್ಡಾಯ ಕಾರ್ಯಕ್ರಮಗಳ ಅನುಷ್ಠಾನ ಮಾಡಬೇಕು. ಪ್ರಧಾನಮಂತ್ರಿಗಳ ಮನ್‌ ಕಿ ಬಾತ್‌ ಕಾರ್ಯಕ್ರಮವನ್ನು ಸಾಮೂಹಿಕವಾಗಿ ಕೇಳುವ ವ್ಯವಸ್ಥೆ ಮಾಡಿಸಬೇಕು. ಸ್ವಯಂಸೇವಾ ಸಂಘಟನೆಗಳ ಜತೆಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸೂಚಿಸಿದರು.

ADVERTISEMENT

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಪಟ್ಟಿ ತಯಾರಿಸಬೇಕು. ಸಂಘ ಪರಿವಾರದ ಜತೆಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.