ADVERTISEMENT

ರಾಮ ಮಂದಿರ ನಿರ್ಮಾಣ ಶತಸಿದ್ಧ: ಕೇಶವಪ್ರಸಾದ್‌ ಮೌರ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 12:25 IST
Last Updated 18 ಫೆಬ್ರುವರಿ 2019, 12:25 IST
   

ಬೆಳಗಾವಿ: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಯೇ ಮಾಡುತ್ತೇವೆ. ಅಲ್ಲಿ ಬಾಬರ್‌ ಹೆಸರಿನ ಒಂದು ಇಟ್ಟಿಗೆಯೂ ಇರುವುದಿಲ್ಲ’ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವಪ್ರಸಾದ್‌ ಮೌರ್ಯ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಯೋಧ್ಯೆ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ವಿವಾದ ರಹಿತ 66 ಎಕರೆ ಭೂಮಿಯನ್ನು ನೀಡುವಂತೆ ಕೇಳಿಕೊಂಡಿದ್ದೇವೆ. ನ್ಯಾಯಾಲಯದ ಆದೇಶ ಬಂದ ನಂತರ ಮುಂದುವರಿಯುತ್ತೇವೆ’ ಎಂದರು.

ಸಾಲ ಮನ್ನಾ– ಮಹಾಮೋಸ:

ADVERTISEMENT

‘ರೈತರ ಸಾಲ ಮನ್ನಾ ಎನ್ನುವುದು ಮಹಾಮೋಸವಾಗಿದೆ. ಕರ್ನಾಟಕ ಸೇರಿದಂತೆ ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ರೈತರಿಗೆ ಸುಳ್ಳು ಭರವಸೆಗಳನ್ನು ನೀಡಲಾಗುತ್ತಿದೆ. ಯಾವೊಬ್ಬ ರೈತರ ಸಾಲ ಮನ್ನಾ ಆಗಿಲ್ಲ’ ಎಂದು ಆರೋಪಿಸಿದರು.

‘ಸಾಲ ಮನ್ನಾ ಕೇಳದಂತೆ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುರಿಯಾಗಿದೆ. ಅದಕ್ಕಾಗಿ ರೈತರಿಗೆ ಕೃಷಿ ಮಾಡಲು ಅಗತ್ಯವಾದ ಎಲ್ಲ ಸಹಕಾರ ನೀಡುತ್ತಿದೆ. ವಿದ್ಯುತ್‌, ನೀರು, ಬಿತ್ತನೆ ಬೀಜ ಪೂರೈಕೆ ಸೇರಿದಂತೆ ಎಲ್ಲ ರೀತಿಯ ಸಹಾಯ ಮಾಡುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.