ADVERTISEMENT

ವಿವೇಕಾನಂದರ ಪಠ್ಯ ಬೇಡವೆಂದು ಕಾಂಗ್ರೆಸ್‌ ಪ್ರತಿಭಟಿಸುತ್ತಿದೆಯೇ: ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2022, 9:13 IST
Last Updated 9 ಜೂನ್ 2022, 9:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್‌ ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಹಿಂದಿನ ಪಠ್ಯಕ್ರಮ ಮುಂದುವರಿಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಇದ್ದ ಪಾಠವನ್ನು ಕಾಂಗ್ರೆಸ್‌ ಸರ್ಕಾರ ನೇಮಿಸಿದ ಸಮಿತಿ ತೆಗೆದುಹಾಕಿತ್ತು. ಇದನ್ನು ಸಮರ್ಥಿಸಿ ಪ್ರತಿಭಟನೆ ಮಾಡುತ್ತಿದ್ದೀರಾ?’ ಎಂದು ಪ್ರಶ್ನಿಸಿದೆ.

‘ಮುಡಂಬಡಿತ್ತಾಯ ಸಮಿತಿ ಪರಿಷ್ಕರಿಸಿದ ಪಠ್ಯಗಳಲ್ಲಿ, ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ 8 ಪಾಠಗಳಿದ್ದವು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅದಕ್ಕೂ ಕತ್ತರಿ ಹಾಕಲಾಯಿತು. ಆದರೆ ಬಿಜೆಪಿ ಸರ್ಕಾರ ನೇಮಿಸಿದ ಸಮಿತಿ ಕುವೆಂಪು ಅವರ 10 ಪಠ್ಯ ಅಳವಡಿಸಿದೆ. ಕಾಂಗ್ರೆಸ್‌ ಪ್ರತಿಭಟನೆ ಕುವೆಂಪು ವಿರುದ್ಧವೇ?’ ಎಂದು ಬಿಜೆಪಿ ಕೇಳಿದೆ.

ADVERTISEMENT

‘ನವ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಇದ್ದ ಪಠ್ಯವನ್ನು ಕಾಂಗ್ರೆಸ್‌ ಸರ್ಕಾರ ತೆಗೆದುಹಾಕಿತ್ತು. ಈಗ ಅದೇ ಹಿಂದಿನ ಪಠ್ಯ ಮುಂದುವರೆಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದೆ. ಅಂದರೆ ಪಠ್ಯಪುಸ್ತಕದಲ್ಲಿ ಕೆಂಪೇಗೌಡರ ಚರಿತ್ರೆ ಇರಬಾರದೇ?’ ಎಂದು ಟ್ವೀಟ್‌ ಮಾಡಿದೆ.

‘ಭೂಕಂದಾಯದ ಪತ್ರಗಳಲ್ಲಿದ್ದ ಕನ್ನಡವನ್ನು ತೆಗೆದು ಪರ್ಷಿಯನ್ ಭಾಷೆ ಹೇರಿದ ಟಿಪ್ಪು ಬಗ್ಗೆ ಕನ್ನಡ ಭಾಷಾಭಿಮಾನಿ ಎಂದು ಬರಗೂರು ಸಮಿತಿ ವೈಭವಿಕರಿಸಿತ್ತು. ಇದನ್ನು ಸಮರ್ಥಿಸುವ ಸಲುವಾಗಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆಯೇ?’ ಎಂದು ಪ್ರಶ್ನಿಸಿದೆ.

‘ಮಾನ್ಯ ಡಿಕೆಶಿ ಹಾಗೂ ಸಿದ್ದರಾಮಯ್ಯನವರೇ, ನಾಡಿನ ಹೆಮ್ಮೆಯ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವನ ಪಾಠಗಳನ್ನು ನಿಮ್ಮದೇ ಸರ್ಕಾರ ನೇಮಿಸಿದ್ದ ಸಮಿತಿ ಪಠ್ಯದಿಂದ ತೆಗೆದುಹಾಕಿತ್ತು. ಇದನ್ನು ಬೆಂಬಲಿಸಿ ಇಂದು ಪ್ರತಿಭಟನೆ ಮಾಡುತ್ತಿದ್ದೀರಾ?’ ಎಂದು ಟ್ವೀಟಿಸಿದೆ.

‘ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಮುಡಂಬಡಿತ್ತಾಯ ಸಮಿತಿ ಪಠ್ಯದಲ್ಲಿ ಸೇರಿಸಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈ ಪಠ್ಯವನ್ನು ಕಿತ್ತು ಹಾಕಿತ್ತು. ಇದನ್ನು ಸಮರ್ಥಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೇ?’ ಎಂದು ಬಿಜೆಪಿ ಕೇಳಿದೆ.

‘ಭಾರತದ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದ ಅವರ ಪಠ್ಯವನ್ನು ಮಕ್ಕಳಿಗೆ ಪ್ರೇರಣೆಯಾಗಲೆಂದು ಸೇರಿಸಲಾಗಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅದಕ್ಕೂ ಕತ್ತರಿ ಹಾಕಲಾಯಿತು. ವಿವೇಕಾನಂದರ ಪಠ್ಯ ಬೇಡವೇ ಬೇಡ ಎಂದು ಕಾಂಗ್ರೆಸ್‌ ಪ್ರತಿಭಟಿಸುತ್ತಿದೆಯೇ?’ ಎಂದು ಟ್ವೀಟ್‌ ಮಾಡಿದೆ.

‘ನಾಡ ಕಟ್ಟುವಲ್ಲಿ ಮೈಸೂರು ಮಹಾರಾಜರ ಪಾತ್ರ ಅತ್ಯಂತ ಸ್ಮರಣೀಯ. ಕಾಂಗ್ರೆಸ್ಸಿಗರೇ, ಕರುನಾಡಿಗೆ ಭದ್ರಬುನಾದಿ ಹಾಕಿಕೊಟ್ಟ ಒಡೆಯರ ವಂಶಸ್ಥರನ್ನು ಪಠ್ಯದಲ್ಲಿ ಅಳವಡಿಸಿರುವುದರನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದೀರಾ?’ ಎಂದು ಬಿಜೆಪಿ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.