ADVERTISEMENT

ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್‌, ಕಾಂಗ್ರೆಸ್‌ ಶಾಸಕರೇ ಕಾರಣ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 8:40 IST
Last Updated 8 ಸೆಪ್ಟೆಂಬರ್ 2019, 8:40 IST
   

ಬೆಳಗಾವಿ: ‘ಬಿಜೆಪಿಯಿಂದ ಆಪರೇಷನ್ ಕಮಲ‌ ನಡೆದಿಲ್ಲ. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ನಡೆಸುತ್ತಿದ್ದವರ ನಡವಳಿಕೆಯಿಂದ ಬೇಸತ್ತು ಕೆಲವು ಶಾಸಕರು ರಾಜೀನಾಮೆ ನೀಡಿದರು. ನಮ್ಮ ಸರ್ಕಾರ ರಚನೆಯಾಗಿದ್ದು ಆ ಶಾಸಕರಿಂದಲೇ. ಇದನ್ನು ಎಷ್ಟು ಬಾರಿ ಬೇಕಾದರೂ ಹೇಳುತ್ತೇನೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

‘ಇನ್ನೂ 10ರಿಂದ 15 ಶಾಸಕರು ರಾಜೀನಾಮೆ ನೀಡಲಿದ್ದಾರೆ’ ಎಂಬ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್ ಅಥವಾ ಕಾಂಗ್ರೆಸ್ ಶಾಸಕರು ಸದ್ಯ ನಮ್ಮೊಂದಿಗೆ ಸಂಪರ್ಕದಲ್ಲಿಲ್ಲ. ಅನರ್ಹ ಶಾಸಕರ ಜೊತೆ ಸಂಪರ್ಕದಲ್ಲಿರಬಹುದು’ ಎಂದರು.

‘ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದಲ್ಲಿ ಸಂತ್ರಸ್ತರು ಪರಿಹಾರದ ವಿಷಯದಲ್ಲಿ ಪ್ರಶ್ನಿಸಿದರು ನಿಜ. ಆದರೆ, ಸಂತ್ರಸ್ತರಿಗೆ ₹10 ಸಾವಿರ ಕೊಟ್ಟಿದ್ದೇ ಹೆಚ್ಚಾಯಿತು ಎಂದು ನಾನು ಹೇಳಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ವಿನಾಕಾರಣ ರಾಜಕಾರಣ ಮಾಡಿದ್ದಾರೆ. ನೆರೆ ವಿಚಾರದಲ್ಲಿ ವಿರೋಧಪಕ್ಷದವರು ಹಾಗೂ ಮಾಧ್ಯಮದವರು ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬಾರದು’ ಎಂದು ಹೇಳಿದರು.

ADVERTISEMENT

‘ಕುರುಬ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ದೊರೆತಿಲ್ಲವೇಕೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯಲ್ಲಿ ಜಾತಿ ರಾಜಕಾರಣ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರದು ಯಾವ ಜಾತಿ ಎಂದು ತಿಳಿಯಲು ಬಹಳಷ್ಟು ದಿನಗಳೇ ಬೇಕಾಯಿತು. ಪಕ್ಷದ ವರಿಷ್ಠರು ಮಾಡುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧವಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.