ADVERTISEMENT

ಡಿ.ಕೆ. ಶಿವಕುಮಾರ್‌ಗೆ ದಮ್‌ ಇದ್ರೆ ಅಜ್ಜಯ್ಯ ಬಳಿ ಆಣೆ ಮಾಡಲಿ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 20:30 IST
Last Updated 14 ಆಗಸ್ಟ್ 2023, 20:30 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ದಮ್‌, ತಾಕತ್‌ ಇದ್ರೆ ಬಿಬಿಎಂಪಿ ಗುತ್ತಿಗೆದಾರರಿಂದ ಲಂಚ ಕೇಳಿಲ್ಲ ಎಂದು ನೊಣವಿನಕೆರೆ ಅಜ್ಜಯ್ಯನ ಸನ್ನಿಧಾನದಲ್ಲಿ ಆಣೆ ಮಾಡಲಿ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸವಾಲು ಹಾಕಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎಲ್ಲದಕ್ಕೂ ಅಜ್ಜಯ್ಯನ ಬಳಿ ಓಡಿ ಹೋಗ್ತಾರೆ. ಈಗ ಆರೋಪ ಬಂದಿದೆ, ಹೋಗಪ್ಪ, ಅಜ್ಜಯ್ಯನ ಬಳಿ ಹೋಗಿ ಆಣೆ– ಪ್ರಮಾಣ ಮಾಡಪ್ಪ’ ಎಂದು ಏಕ ವಚನದಲ್ಲಿ ಕಾಲೆಳೆದರು.

ಶಿವಕುಮಾರ್‌ ಬೆಂಗಳೂರು ಅಭಿವೃದ್ಧಿ ಸಚಿವರಲ್ಲ. ಅವರು ಬೆಂಗಳೂರು ನಿರ್ನಾಮ ಸಚಿವ. ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಡಿ.ಕೆ.ಶಿವಕುಮಾರ್ ಕಳಂಕ ತರುತ್ತಿದ್ದಾರೆ. ಕೇವಲ ಕೃಷಿಯಿಂದ ಅಪಾರ ಸಂಪತ್ತು ಗಳಿಸಿರುವ ಇವರು ಅದು ಹೇಗೆ ಎಂಬುದನ್ನು ಮುಖ್ಯಮಂತ್ರಿ ಸೇರಿ ಎಲ್ಲರಿಗೂ ಹೇಳಿಕೊಡಲಿ ಎಂದರು.

ADVERTISEMENT

‘ಕಮಿಷನ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂಬ ಶಿವಕುಮಾರ್‌ ಹೇಳಿಕೆಗೆ ‍ಪ್ರತಿಕ್ರಿಯಿಸಿ, ‘ನೀನು ರಾಜಕೀಯ ನಿವೃತ್ತಿನಾದ್ರೂ ಆಗು, ಕಾಂಗ್ರೆಸ್‌ ಅನ್ನು ನಿರ್ನಾಮನಾದ್ರೂ ಮಾಡು’ ಎಂದು ಲೇವಡಿ ಮಾಡಿದರು.

‘ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಎಟಿಎಂ ಸರ್ಕಾರವಾಗಿದೆ. ಲೋಕಸಭಾ ಚುನಾವಣೆಗಾಗಿ ಹಣ ದೋಚುವುದರಲ್ಲಿ ನಿರತವಾಗಿದೆ. ಸಿಎಂ, ಸೂಪರ್‌ ಸಿಎಂ ಮತ್ತು ಶ್ಯಾಡೋ ಸಿಎಂಗಳಿದ್ದಾರೆ. ವೈಎಸ್‌ಟಿ ಜತೆಗೆ ಸುರ್ಜೇವಾಲ ಬರ್ತಾರೆ ಟಾರ್ಗೆಟ್‌ ಕೊಡುತ್ತಾರೆ. ಅದಕ್ಕೆ ತಕ್ಕಂತೆ ಕಲೆಕ್ಷನ್ ಮಾಡ್ತಾರೆ. ಡಿ.ಕೆ.ಶಿ ಟ್ರ್ಯಾಕ್‌ ರೆಕಾರ್ಡ್‌ ಎಲ್ಲರಿಗೂ ಗೊತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.