ADVERTISEMENT

ಪಿಎಚ್‌ಡಿಗಾಗಿ ದೇವೇಗೌಡರ ಭೇಟಿಯಾದ ರವಿ: ಪ್ರಬಂಧದ ವಿಷಯವೇನು, ಗೌಡರಿಗೇನು ನಂಟು? ‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2021, 12:45 IST
Last Updated 10 ಆಗಸ್ಟ್ 2021, 12:45 IST
ದೇವೇಗೌಡರನ್ನು ಭೇಟಿಯಾಗಿ ಚರ್ಚಿಸುತ್ತಿರುವ ಸಿ.ಟಿ ರವಿ
ದೇವೇಗೌಡರನ್ನು ಭೇಟಿಯಾಗಿ ಚರ್ಚಿಸುತ್ತಿರುವ ಸಿ.ಟಿ ರವಿ    

ನವದೆಹಲಿ: ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ತಮ್ಮ ಪ್ರೌಢ ಪ್ರಬಂಧ (ಪಿಎಚ್‌ಡಿ) ವಿಚಾರವಾಗಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರನ್ನು ಸೋಮವಾರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ನನ್ನ ಪಿಎಚ್‌ಡಿ ಪ್ರಬಂಧದ ಭಾಗವಾಗಿ, ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರೊಂದಿಗೆ ನವದೆಹಲಿಯಲ್ಲಿ ಚರ್ಚೆ ನಡೆಸಿದೆ. 88 ವರ್ಷ ವಯಸ್ಸಿನ ಅವರಲ್ಲಿರುವ ಉತ್ಸಾಹ ಪ್ರಶಂಸನೀಯ. ಭಾರತೀಯ ರಾಜಕೀಯದ ಬಗ್ಗೆ ಅವರ ಜ್ಞಾನ ಮತ್ತು ಅನುಭವ ಅದ್ಭುತವಾದದ್ದು. ನಿಮ್ಮ ಜ್ಞಾನವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಗೌಡರೇ,’ ಎಂದು ಅವರು ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ಸಿ.ಟಿ ರವಿ ಅವರ ಪ್ರಬಂಧದ ವಿಷಯವೇನು? ಪ್ರಂಬಂಧದ ವಿಷಯಕ್ಕೂ ದೇವೇಗೌಡರಿಗೂ ಇರುವ ನಂಟೇನು ಎಂಬ ಪ್ರಶ್ನೆಗಳಿಗೆ ಅವರ ಆಪ್ತ ಮೂಲಗಳು ಉತ್ತರ ನೀಡಿವೆ.

‘ಭಾರತೀಯ ರಾಜಕೀಯದಲ್ಲಿ ಸಮ್ಮಿಶ್ರ ಸರ್ಕಾರಗಳು’ ಎಂಬುದು ಸಿ.ಟಿ ರವಿ ಅವರ ಪಿಎಚ್‌ಡಿ ವಿಷಯ. ಇದಕ್ಕಾಗಿ ಮಾತುಕತೆ ನಡೆಸಲು ಸಿ.ಟಿ ರವಿ ಅವರು ದೇವೇಗೌಡರನ್ನು ಭೇಟಿಯಾಗಿದ್ದರು. ಕೋವಿಡ್‌ಗೂ ಮೊದಲೇ ಭೇಟಿ ನಿಗದಿಯಾಗಿತ್ತು. ಕೋವಿಡ್‌ನಿಂದಾಗಿ ಭೇಟಿ ತಡವಾಗಿದೆ. ಆದರೆ, ಸೋಮವಾರ ಸಿ.ಟಿ ರವಿ ಅವರು ದೆಹಲಿಯಲ್ಲಿ ದೇವೇಗೌಡರನ್ನು ಭೇಟಿಯಾಗಿ ಇದೇ ವಿಚಾರವಾಗಿ ಚರ್ಚಿಸಿದರು, ‘ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.