ADVERTISEMENT

Karnataka Assembly Session | ಆಡಳಿತ ಪಕ್ಷದವರ ಗೈರು: ವಿಪಕ್ಷದವರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 16:14 IST
Last Updated 14 ಫೆಬ್ರುವರಿ 2024, 16:14 IST
   

ಬೆಂಗಳೂರು: ಬುಧವಾರ ಮಧ್ಯಾಹ್ನ ಊಟದ ವಿರಾಮದ ಬಳಿಕ ಸಚಿವರೂ ಸೇರಿದಂತೆ ಆಡಳಿತ ಪಕ್ಷದ ಬಹುತೇಕ ಸದಸ್ಯರು ವಿಧಾನಸಭೆಯ ಕಲಾಪಕ್ಕೆ ಗೈರಾಗಿದ್ದಕ್ಕೆ ವಿರೋಧ ಪಕ್ಷ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಭಾಧ್ಯಕ್ಷ ಯು.ಟಿ. ಖಾದರ್‌ ಕೂಡ ಆಡಳಿತ ಪಕ್ಷದ ಸದಸ್ಯರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಕಲಾಪ ಆರಂಭವಾದಾಗ ಸಚಿವರಾದ ಪ್ರಿಯಾಂಕ್‌ ಖರ್ಗೆ, ಕೃಷ್ಣ ಬೈರೇಗೌಡ, ಶಿವರಾಜ ತಂಗಡಗಿ ಮತ್ತು ಮೂವರು ಶಾಸಕರು ಮಾತ್ರ ಆಡಳಿತ ಪಕ್ಷದ ಸಾಲಿನಲ್ಲಿದ್ದರು. ‘ಸರ್ಕಾರಕ್ಕೆ ಕಲಾಪ ನಡೆಸಲು ಆಸಕ್ತಿ ಇಲ್ಲ. ಸಚಿವರು, ಶಾಸಕರು, ಅಧಿಕಾರಿಗಳು ಕೂಡ ಸದನದಲ್ಲಿ ಇಲ್ಲ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅಸಮಾಧಾನ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ಸದಸ್ಯರು ಸದನಕ್ಕೆ ಬಾರದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಖಾದರ್‌, ‘ಅಧಿವೇಶನ ನಡೆಯುತ್ತಿರುವಾಗ ಎಲ್ಲರೂ ಎಲ್ಲಿ ಹೋಗಿದ್ದಾರೆ. ಅಧಿಕಾರಿಗಳು ಕೂಡ ಗ್ಯಾಲರಿಗೆ ಬರುವುದಿಲ್ಲ’ ಎಂದರು.

ADVERTISEMENT

ಗುರುವಾರದಿಂದ ಕಡ್ಡಾಯವಾಗಿ ಹಾಜರಿರುವಂತೆ ಎಲ್ಲ ಸದಸ್ಯರಿಗೂ ಮುಖ್ಯಮಂತ್ರಿಯವರಿಂದ ಸೂಚನೆ ಕೊಡಿಸಲಾಗುವುದು ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಬಿಜೆಪಿ ಸದಸ್ಯರಿಗೆ ಕೈ ಮುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.