ADVERTISEMENT

ವಿಧಾನಸಭೆಯಲ್ಲೂ ಬಿಜೆಪಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 16:15 IST
Last Updated 10 ಮಾರ್ಚ್ 2022, 16:15 IST

ಬೆಂಗಳೂರು: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವುದಕ್ಕೆ ಗುರುವಾರ ವಿಧಾನಸಭೆಯಲ್ಲೂ ಸಂಭ್ರಮಿಸಿದ ಆಡಳಿತ ಪಕ್ಷದ ಸದಸ್ಯರು, ‘ಜೈ ಶ್ರೀರಾಮ್‌’ ಘೋಷಣೆಯೊಂದಿಗೆ ಕಾಂಗ್ರೆಸ್‌ ಸದಸ್ಯರನ್ನು ಕಿಚಾಯಿಸಿದರು.

ಸದನದ ಕಲಾಪ ಆರಂಭವಾಗುವ ಸಮಯದಲ್ಲೇ ಬಿಜೆಪಿ ಶಾಸಕರು, ಸಚಿವರು ಸಂಭ್ರಮದಲ್ಲಿ ಮುಳುಗಿದ್ದರು. ಆಗ, ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌ ಮಾತನಾಡಲು ಎದ್ದುನಿಂತರು, ‘ಕಾಂಗ್ರೆಸ್‌ ಕತೆ ಮುಗಿಯಿತು ಅಲ್ವಾ’ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು. ‘ಜೈ ಶ್ರೀರಾಮ್‌’ ಎಂಬ ಘೋಷಣೆಯನ್ನೂ ಮೊಳಗಿಸಿದರು.

ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ‘ಈಶ್ವರಪ್ಪ ಅಂತೂ ಮುಖ್ಯಮಂತ್ರಿ ಆಗುವುದಿಲ್ಲ. ಆದರೂ, ಯಾಕೆ ಇಷ್ಟು ಮಾತನಾಡುತ್ತಾರೊ?’ ಎಂದು ಕೇಳಿದರು. ಬಿಜೆಪಿಯವರು, ‘ಜೈ ಶ್ರೀರಾಮ್‌’ ಎಂದರೆ ಕಾಂಗ್ರೆಸ್‌ನವರು, ‘ಜೈ ಹನುಮಾನ್‌’ ಎಂದು ಘೋಷಣೆ ಹಾಕಿದರು.

ADVERTISEMENT

‘ಅಲ್ಲೆಲ್ಲ ಸೂತಕ. ಇಲ್ಲಿಯೂ ಸೂತಕವಾ’ ಎಂದು ಈಶ್ವರಪ್ಪ ಕೆಣಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.