ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಬಿಜೆಪಿ ಶಾಸಕರ ಸಭೆಯನ್ನು ಕರೆದಿದ್ದಾರೆ. ಈ ಸಭೆ ಬೆಳಿಗ್ಗೆ 11 ರಿಂದ ರಾತ್ರಿ 8 ರವರೆಗೆ ನಡೆಯಲಿದೆ.
ಬಜೆಟ್ಗೆ ಮುನ್ನ ಶಾಸಕರ ಜತೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯವನ್ನು ಕೇಳಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಯವರು ತಮ್ಮ ಕೈಗೆ ಸಿಗುವುದಿಲ್ಲ ಎಂಬ ಆರೋಪವೂ ಇರುವುದರಿಂದ ಎಲ್ಲ ಭಾಗದ ಶಾಸಕರಿಂದ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ಹೇಳಿವೆ.
ಒಂದೇ ದಿನದಲ್ಲಿ ಎಲ್ಲ ಶಾಸಕರ ಜತೆ ಸಮಾಲೋಚನೆ ಸಾಧ್ಯವಾಗದಿದ್ದರೆ, ಮಂಗಳವಾರವೂ ಸಭೆ ಮುಂದುವರೆಯುವ ಸಾಧ್ಯತೆ ಇದೆ.
ಕಳೆದ ಒಂದು ವರ್ಷದಿಂದ ನಿರೀಕ್ಷಣಾ ಮಂದಿರಗಳೂ ಸೇರಿದಂತೆ ವಿವಿಧ ಹೆಸರಿನಲ್ಲಿ ಭವನಗಳ ನಿರ್ಮಾಣಕ್ಕೆ ತಡೆ ನೀಡಲಾಗಿದೆ. ಇವುಗಳನ್ನು ಪುನರಾರಂಭಿಸಬೇಕು ಎಂಬ ಒತ್ತಾಯ ಶಾಸಕರಿಂದ ಕೇಳಿ ಬಂದಿದೆ. ಹಲವು ವರ್ಷಗಳಿಂದ ನಿರ್ಮಾಣವಾಗಿರುವ ಭವನಗಳು ಅನುತ್ಪಾದಕ ಆಗಿರುವುದರಿಂದ, ಪುನಃ ಅಂತಹ ಭವನಗಳ ನಿರ್ಮಾಣದಿಂದ ಬೊಕ್ಕಸಕ್ಕೂ ಹೊರೆ ಆಗುತ್ತದೆ. ಅದರ ಬದಲಿಗೆ ರಸ್ತೆ, ಕುಡಿಯುವ ನೀರು, ಸೇತುವೆಗಳಂತಹ ಮೂಲ ಸೌಕರ್ಯಗಳಿಗೆ ಒತ್ತು ನೀಡುವ ಬಗ್ಗೆ ಮನವೊಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.