ADVERTISEMENT

ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮುಂದಿನ ಚುನಾವಣೆ: ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 10:32 IST
Last Updated 31 ಜುಲೈ 2021, 10:32 IST
 ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಬೆಂಗಳೂರು: 'ಸಂಘಟನೆಯ ಶಕ್ತಿಯಿಂದ ಸಂಪೂರ್ಣ ಬಹುಮತ ಗಳಿಸುವುದಕ್ಕಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ 2023ರ ವಿಧಾನಸಭಾ ಚುನಾವಣೆ ಎದುರಿಸಲಾಗುವುದು' ಎಂದು ಬಿಜೆಪಿಯ ಹಿರಿಯ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಆದರು. ಆದರೆ, ದುರದೃಷ್ಟದಿಂದ ನಾಲ್ಕು ಬಾರಿಯೂ ನಮಗೆ ಪೂರ್ಣ ಬಹುಮತ ಇರಲಿಲ್ಲ. ಇದರಿಂದ ಗೊಂದಲಗಳು ಆದವು' ಎಂದರು.

ಮುಂದಿನ ಚುವಾಣೆಯನ್ನು ನಳಿನ್ ಕುಮಾರ್ ನೇತೃತ್ವದಲ್ಲಿ ಸಂಘಟನೆಯ ಶಕ್ತಿಯಿಂದಲೇ ಎದುರಿಸಿ ಪೂರ್ಣ ಬಹುಮತ ಪಡೆಯಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಮುನ್ನಡೆಸಿದರೆ, ನಳಿನ್ ಕುಮಾರ್ ಸಂಘಟನೆಯನ್ನು ಬಲಪಡಿಸಲಿದ್ದಾರೆ ಎಂದರು.

ADVERTISEMENT

ತಮಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಅನೇಕರ ಆಸೆ. ರಾಜ್ಯದ ವಿವಿಧೆಡೆಯಿಂದ‌ ಸಾವಿರಾರು ಮಂದಿ ದೂರವಾಣಿ ಕರೆಮಾಡಿ‌ ಅವರ ಆಸೆ ಹಂಚಿಕೊಂಡಿದ್ದಾರೆ. ಆದರೆ, ಪಕ್ಷದ ದೃಷ್ಟಿಯಿಂದ ಯಾರಿಗೆ ಯಾವ ಸ್ಥಾನ ನೀಡಿದರೆ ಅನುಕೂಲ ಆಗಲಿದೆ ಎಂಬುದನ್ನು ಆಧರಿಸಿ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಈಶ್ವರಪ್ಪ ಹೇಳಿದರು.

ಹಿಂದುಳಿದ ವರ್ಗಗಳಿಗೆ ಬಿಜೆಪಿ ನೀಡಿದಷ್ಟು ಅವಕಾಶಗಳನ್ನು ಯಾವ ಪಕ್ಷವೂ ನೀಡಿಲ್ಲ. ಕೇಂದ್ರ ಸಂಪುಟದಲ್ಲಿ ಹಿಂದುಳಿದ ವರ್ಗಗಳ 45 ಮಂದಿ ಸಚಿವರಿದ್ದಾರೆ. ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಹಿಂದುಳಿದ ವರ್ಗಗಳಿಗೆ ಶೇಕಡ 27ರಷ್ಟು ಮೀಸಲಾತಿ ನೀಡಲಾಗಿದೆ. ಬಿಜೆಪಿ ವಿರುದ್ಧದ ಆರೋಪಗಳಿಗೆ ಯಾವ ಆಧಾರವೂ ಇಲ್ಲ ಎಂದರು.

ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, 'ಪಕ್ಷ, ಸಂಘಟನೆ ಮತ್ತು ಸರ್ಕಾರದ ಭಾಗವಾಗಿರುವ ನಾವೆಲ್ಲ ಆಗಾಗ ಭೇಟಿಮಾಡಿ ಸಮಾಲೋಚನೆ ನಡೆಸುವುದು ಸಾಮಾನ್ಯ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.