ಮಂಗಳೂರು: ಸೋಮವಾರ ಬೆಳಿಗ್ಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ವ್ಯಕ್ತಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೂ ಹೋಗಲು ಯತ್ನಿಸಿದ್ದ ಎಂಬ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿಯು ಕೆಂಜಾರುವರೆಗೆ ನಗರ ಸಾರಿಗೆ ಬಸ್ ನಲ್ಲಿ ಬಂದಿದ್ದ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಬೇರೆ ವಾಹನದಲ್ಲಿ ಬಂದಿದ್ದ. ಬಾಂಬ್ಇರಿಸಿ ನಡೆದುಕೊಂಡೇ ಕೆಂಜಾರುವರೆಗೆ ಬಂದಿದ್ದ ಎಂಬುದೂ ಗೊತ್ತಾಗಿದೆ.
ಬೇರೆ ಪ್ರಯಾಣಿಕರೊಬ್ಬರನ್ನು ಕರೆತಂದಿದ್ದ ಆಟೊ ರಿಕ್ಷಾ ಕೆಂಜಾರಿಗೆ ಬಂದಾಗ ಆರೋಪಿ ಅಲ್ಲಿ ನಡೆದು ಹೋಗುತ್ತಿದ್ದ. ಕೈ ಅಡ್ಡ ಹಾಕಿ, 'ಕದ್ರಿ ದೇವಸ್ಥಾನಕ್ಕೆ ಬಿಡುತ್ತೀರಾ? ಎಷ್ಟು ದರ?' ಎಂದು ವಿಚಾರಿಸಿದ್ದ. ಆಟೊ ಚಾಲಕ ಹೇಳಿದ್ದ ಮೊತ್ತಕ್ಕೆ ಒಪ್ಪದೇ ಕಾವೂರುವರೆಗೆ ಮಾತ್ರ ಆಟೊದಲ್ಲಿ ಬಂದಿದ್ದ. ಅಲ್ಲಿ ಇಳಿದು ನಾಪತ್ತೆಯಾಗಿದ್ದಾನೆ.
ಆಟೊ ಚಾಲಕನನ್ನು ಪತ್ತೆ ಮಾಡಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ. ತನಿಖಾ ತಂಡಕ್ಕೆ ಆಟೊ ಚಾಲಕ ಈ ಮಾಹಿತಿ ನೀಡಿದ್ದಾನೆ.
ತುಳು ಭಾಷಿಕ?: ಶಂಕಿತ ವ್ಯಕ್ತಿಯು ತುಳು ಭಾಷೆಯಲ್ಲೇ ತನ್ನೊಂದಿಗೆ ಮಾತನಾಡಿದ್ದಾನೆ. ವಾಪಸ್ ಹೋಗುವಾಗಲೂ ಆತನ ಬಳಿ ಒಂದು ಬ್ಯಾಗ್ ಇತ್ತು ಎಂಬ ಮಾಹಿತಿಯನ್ನೂ ಆಟೊ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.