ಶಿರಾ: ವಿವಾಹದ ಹಿಂದಿನ ದಿನ ಸಿನಿಮೀಯ ರೀತಿಯಲ್ಲಿ ನಾಟಕವಾಡಿದವಧು ಪ್ರಿಯಕರನ ಜೊತೆ ಹೋಗಿರುವ ಪ್ರಸಂಗ ತಾಲ್ಲೂಕಿನ ಮೆಳೇಕೋಟೆ ಗ್ರಾಮದಲ್ಲಿ ನಡೆದಿದೆ.
ಮೆಳೇಕೋಟೆಯ ಯುವತಿಯ ಜೊತೆ ದೊಡ್ಡಗೂಳ ಗ್ರಾಮದ ಮಂಜುನಾಥ್ ವಿವಾಹ ನಿಶ್ಚಯವಾಗಿತ್ತು. ಶನಿವಾರ ಪ್ರಥಮ ಶಾಸ್ತ್ರ ಹಾಗೂ ಆರತಕ್ಷತೆ ನಡೆದಿತ್ತು. ಭಾನುವಾರ ಬೆಳಿಗ್ಗೆ ಮುಹೂರ್ತಕ್ಕೆ ಎಲ್ಲ ರೀತಿಯ ತಯಾರಿ ಜರುಗಿತ್ತು.
ಶನಿವಾರ ರಾತ್ರಿ ವಧು ವಿಷ ಸೇವಿಸುವ ನಾಟಕವಾಡಿದ್ದಾಳೆ. ವಿಷವನ್ನು ಮೈ ಮೇಲೆ ಚೆಲ್ಲಿಕೊಂಡಿದ್ದಾಳೆ. ಪೋಷಕರು ವಧುವನ್ನು ತಾವರೆಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಗ ವಧು ಆಸ್ಪತ್ರೆಯಿಂದ ತನ್ನ ಪ್ರಿಯಕರನಾದ ಅತ್ತೆಯ ಮಗ ಚೇತನ್ ಎಂಬುವವರ ಜೊತೆ ಪರಾರಿಯಾಗಿದ್ದಾಳೆ. ಈ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಯುವತಿಗೆ ಈ ಮದುವೆ ಇಷ್ಟ ಇರಲಿಲ್ಲ. ಪೋಷಕರು ಬಲವಂತವಾಗಿ ಒಪ್ಪಿಸಿದ್ದರು ಎನ್ನಲಾಗಿದೆ.
‘ವಧುವಿನ ಸಂಬಂಧಿಕರು ಠಾಣೆಗೆ ಬಂದು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಆದರೆ ದೂರು ನೀಡಿಲ್ಲ’ ಎಂದು ತಾವರೆಕೆರೆಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.