ADVERTISEMENT

ಪ್ರವಾಹ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ, ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 7:21 IST
Last Updated 5 ಆಗಸ್ಟ್ 2019, 7:21 IST
   

ರಾಯಚೂರು: ಕೃಷ್ಣಾ ನದಿ ತೀರದ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಉಂಟಾಗಿರುವುದರಿಂದಬೆಳೆ ಹಾನಿ ಹಾಗೂ ಇತರೆ ಆಸ್ತಿ ಹಾನಿಯಾಗಿದ್ದು, ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸೋಮವಾರ ಸಂಜೆ ದೆಹಲಿಗೆ ಹೋಗುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸೋಮವಾರ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸುವ ಪೂರ್ವ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎರಡು ದಿನ ದೆಹಲಿಯಲ್ಲಿ ಇದ್ದು ಹೆಚ್ಚಿನ ಪರಿಹಾರ ಕೋರಿ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಪ್ರವಾಹದಿಂದ ಬೆಳೆಗಳಲ್ಲಿ ನೀರು ನಿಂತುಕೊಂಡಿದ್ದು ಬೆಳೆ ಹಾನಿಯಾದರೆ ಪರಿಹಾರಕೊಡುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ಲಿಂಗಸುಗೂರು ತಾಲೂಕು ನಡುಗಡ್ಡೆ ಪ್ರದೇಶದ ಜನರಿಗೆ ಆಹಾರ ಧಾನ್ಯಗಳ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ನದಿ ಪಾತ್ರದಲ್ಲಿರುವ ಗ್ರಾಮಗಳ ಜನರಿಗೆ ಆಹಾರ ವಿತರಣೆಗೆ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಈಗಾಗಲೇ ಎನ್ಆರ್ಡಿಎಫ್ ಮತ್ತು ಎಸ್ಟಿಆರ್ಎಸ್ ತಂಡಗಳು ಬಂದಿದ್ದು ಯಾವುದೇ ಪ್ರಾಣ ಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿದರು.

ADVERTISEMENT

ರಾಯಚೂರು ತಾಲ್ಲೂಕಿನಲ್ಲಿ 230 ಹೆಕ್ಟೇರ್, ಲಿಂಗಸಗೂರು ತಾಲೂಕಿನಲ್ಲಿ 96.8 ಹೆಕ್ಟೇರ್‌ಮತ್ತು ದೇವದುರ್ಗ ತಾಲ್ಲೂಕಿನಲ್ಲಿ 36 ಹೆಕ್ಟೇರ್ಬೆಳೆಗಳಿಗೆ ನೀರು ನುಗ್ಗಿದ್ದು ಜಿಲ್ಲೆಯಲ್ಲಿ ಒಟ್ಟು 368.8 ಹೆಕ್ಟೇರ್‌ ಪ್ರದೇಶದಲ್ಲಿನೀರು ನಿಂತುಕೊಂಡಿದೆ ಎಂದರು.

ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಒಟ್ಟು 51 ಗ್ರಾಮಗಳಿಗೆ ಹಾನಿಯಾಗಿದೆ.2009ರಲ್ಲಿ ಪ್ರವಾಹ ಉಂಟಾಗಿದ್ದಾಗಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿತ್ತು. 1138 ಮನೆಗಳ ನಿರ್ಮಾಣಕ್ಕೆ ಯೋಜನೆ ಮಾಡಿಕೊಡಲಾಗಿತ್ತು. ಅದರಲ್ಲಿ ಒಂದು ಸಾವಿರದಷ್ಟು ಮನೆಗಳು ಇನ್ನೂ ನಿರ್ಮಾಣ ಆಗಬೇಕಾಗಿದೆ. ಗ್ರಾಮಸ್ಥರು ಬಯಸಿದರೆ ಹೊಸ ಜಾಗಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ರಾಯಚೂರು ಜಿಲ್ಲೆಯ ಪ್ರವಾಹ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ಮೂಲಕ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.