ಬೆಂಗಳೂರು: ನಗರದ ವಿವಿಧೆಡೆ ಭಗವಾನ್ ಬುದ್ಧನ ಜಯಂತಿಯನ್ನು ಸಂಭ್ರಮ ಹಾಗೂ ಭಕ್ತಿ ಭಾವದಿಂದ ಆಚರಿಸಲಾಯಿತು.
ಗಾಂಧಿನಗರದ ಮಹಾಬೋಧಿ ಸೊಸೈಟಿಯಲ್ಲಿ ಪೂಜೆ ಹಾಗೂ ಧ್ಯಾನಗಳು ನಡೆದವು. ಸೊಸೈಟಿಯ ಆವರಣದಲ್ಲಿ ಹೂವಿನಿಂದ ಅಲಂಕೃತಗೊಂಡಿದ್ದ ಬುದ್ಧನ ಪ್ರತಿಮೆಗೆ ಬೌದ್ಧ ಭಿಕ್ಕುಗಳು ನಮನ ಸಲ್ಲಿಸಿದರು.
ಸತಿಪಟ್ಠಾಣ ಕುಟೀರದಿಂದ ವಿಹಾರದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬುದ್ಧ ವಂದನೆ, ಆಚಾರ್ಯ ಪೂಜೆ, ಪರಿತ್ರಾಣ ಪಠಣಗಳೂ ನಡೆದವು. ಸಂಜೆ ದೀಪದೊಂದಿಗೆ ಬೋಧಿ ಪೂಜೆ ನಡೆಸಲಾಯಿತು. ಪೂರ್ಣಿಮೆಯ ಪೂಜೆ ಹಾಗೂ ಚೈತ್ಯ ಪೂಜೆಗಳೂ ನಡೆದವು.
ವಿಶ್ವ ಬುದ್ಧ ಧಮ್ಮ ಸಂಘವು ಸದಾಶಿವನಗರದ ನಾಗಸೇನಾ ಬುದ್ಧವಿಹಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.
ನಿರ್ಮಾಣ್ ಶೆಲ್ಟರ್ಸ್ ವತಿಯಿಂದ ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿ ಬುದ್ಧ ಪೂರ್ಣಿಮೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಗವಾನ್ ಬುದ್ಧ ಬಡಾವಣೆಯಲ್ಲಿರುವ ಬುದ್ಧನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು.
‘ಬುದ್ಧನು ಅಹಿಂಸೆಯ ಪ್ರತಿಪಾದಕನಾಗಿದ್ದ. ಆತನ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು’ ಎಂದು ನಿರ್ಮಾಣ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಿ.ಲಕ್ಷ್ಮಿನಾರಾಯಣ್ ತಿಳಿಸಿದರು.
ರಂಗೋತ್ರಿ ಸಾಂಸ್ಕೃತಿಕ ಸಂಸ್ಥೆ ಹಾಗೂ ನ್ಯೂ ಹಾರ್ಡ್ವಿಕ್ ಇಂಡಿಯನ್ ಸ್ಕೂಲ್ (ಎನ್ಎಚ್ಐಎಸ್) ಸಹಯೋಗದಲ್ಲಿ ಕೊಡಿಗೆಹಳ್ಳಿಯಲ್ಲಿ ಬುದ್ಧ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.