ADVERTISEMENT

ಬಜೆಟ್ ನಿರೀಕ್ಷೆ: ಅನ್ನದಾತರು, ಬಡವರತ್ತ ಕುಮಾರ ಲಕ್ಷ್ಯ

ವಿದ್ಯಾರ್ಥಿಗಳಿಗೆ ‘ಸಿದ್ದಗಂಗಾ ಶ್ರೀ ಅನ್ನ ದಾಸೋಹ’ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 5:42 IST
Last Updated 8 ಫೆಬ್ರುವರಿ 2019, 5:42 IST
   

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮತ ಗಳಿಕೆಗೆ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಓಲೈಕೆಯ ಯೋಜನೆಗಳನ್ನು ಒಳಗೊಂಡ ‘ಜನಪ್ರಿಯ ಬಜೆಟ್‌’ ಮಂಡಿಸುವ ಮೂಲಕ ಅನ್ನದಾತರು ಮತ್ತು ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಕುಟುಂಬಗಳ ಮನಗೆಲ್ಲಲು ತಯಾರಿ ನಡೆಸಿದ್ದಾರೆ.

ಎಲ್ಲ ರಾಜಕೀಯ ಅನಿಶ್ಚಿತತೆಗಳ ಮಧ್ಯೆಯೇ 2019-20ನೇ ಸಾಲಿನ ಆಯವ್ಯಯವನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಕುಮಾರಸ್ವಾಮಿ ಮಂಡಿಸಲಿದ್ದಾರೆ.

ರಾಜ್ಯದ 22 ಲಕ್ಷ ರೈತರು ಆರ್ಥಿಕ ನೆರವಿಗೆ ಸಹಕಾರ ವಲಯವನ್ನು ಅವಲಂಬಿಸಿದ್ದಾರೆ. ಉಳಿದವರು ವಾಣಿಜ್ಯ ಬ್ಯಾಂಕುಗಳ ಮೊರೆ ಹೋಗುತ್ತಿದ್ದಾರೆ. ಹೊಸ ಕಾರ್ಯಕ್ರಮಗಳ ಮೂಲಕ ಇನ್ನೂ 10 ಲಕ್ಷದಿಂದ 15 ಲಕ್ಷ ರೈತರನ್ನು ಸಹಕಾರಿ ಕ್ಷೇತ್ರದ ಕಡೆಗೆ ಸೆಳೆಯಲು ಅವರು ಚಿಂತನೆ ನಡೆಸಿದ್ದಾರೆ. ಹಾಗಾಗಿ ರೈತ ವರ್ಗಕ್ಕೆ ಭರ್ಜರಿ ಕೊಡುಗೆ ನೀಡುವ ಸಾಧ್ಯತೆ ದಟ್ಟವಾಗಿದೆ.

ADVERTISEMENT

ಮೀಟರ್‌ ಬಡ್ಡಿಯಿಂದ ಬಡವರಿಗೆ ರಕ್ಷಣೆ ನೀಡಲು ‘ಋಣ ಮುಕ್ತ ಪರಿಹಾರ ಕಾಯ್ದೆ’ ತರಲು ಈಗಾಗಲೇ ಪ್ರಕ್ರಿಯೆ ನಡೆದಿದೆ. ಈ ಮಧ್ಯೆ, ಬಿಪಿಎಲ್‌ ಕುಟುಂಬಗಳು ಕೈಸಾಲ ಪಡೆದು ಸಂಕಷ್ಟಕ್ಕೆ ಸಿಲುಕದಂತೆ ಮಾಡಲು ‘ದೀನ ಬಂಧು’ ಹೆಸರಿನಲ್ಲಿ ಯೋಜನೆ ಘೋಷಿಸುವ ಪ್ರಸ್ತಾವ ಇದೆ. ಈ ಯೋಜನೆಯಡಿ ಸಹಕಾರಿ ಸಂಸ್ಥೆಗಳಿಂದ ₹ 5 ಸಾವಿರದವರೆಗೆ ಓವರ್‌ ಡ್ರಾಫ್ಟ್ ಪಡೆಯುವ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.

ಇತ್ತೀಚೆಗೆ ನಿಧನರಾದ ಸಿದ್ಧಗಂಗಾ ಶ್ರೀಗಳ ಹೆಸರು ಚಿರಸ್ಥಾಯಿ ಮಾಡಬೇಕೆಂಬ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ‘ಸಿದ್ದಗಂಗಾ ಶ್ರೀ ಅನ್ನ ದಾಸೋಹ’ ಎಂದು ಪುನರ್‌ನಾಮಕರಣಗೊಳಿಸಿ ಘೋಷಿಸುವ ಪ್ರಸ್ತಾವವೂ ಇದೆ.

ಕೇಂದ್ರದ ಫಸಲ್ ಬಿಮಾ ಯೋಜನೆಯ ವಿರುದ್ದ ವರ್ಗ ಮುನಿಸಿಕೊಂಡಿರುವ ರೈತ ಸಮೂಹಕ್ಕೆ ಆಸರೆಯಾಗಲು, ರಾಜ್ಯ ಸರ್ಕಾರದಿಂದಲೇ ವಿಮಾ ಯೋಜನೆ ಆರಂಭಿಸುವ ಪ್ರಸ್ತಾವ ಇದೆ, ಇದಕ್ಕಾಗಿ ಬಿಹಾರ ರಾಜ್ಯದ ಮಾದರಿಯಲ್ಲಿ ಪ್ರತ್ಯೇಕ ನೋಡಲ್ ಏಜೆನ್ಸಿ ಹುಟ್ಟು ಹಾಕುವ ಬಗ್ಗೆ ಪ್ರಸ್ತಾಪಿಸಲಿದ್ದಾರೆ.

‘ಯಶಸ್ವಿನಿ’ ಆರೋಗ್ಯ ಯೋಜನೆ ಮರು ಜಾರಿ ಬಹುತೇಕ ಖಚಿತ. ಕೇಂದ್ರದ ಜೊತೆ ಮಾಡಿಕೊಂಡಿರುವ ಒಪ್ಪಂದದಂತೆ ‘ಆಯುಷ್ಮಾನ್‌ ಕರ್ನಾಟಕ ಆರೋಗ್ಯ ಯೋಜನೆ’ಯಡಿ ಎರಡನೇ ಹಂತದ ಚಿಕಿತ್ಸೆಗಾಗಿ ‘ಯಶಸ್ವಿನಿ’ ಯೋಜನೆ ಜಾರಿ ಮಾಡಲಿದೆ.

ಮುಖ್ಯಾಂಶಗಳು

* ವಿಧಾನಸಭೆಯಲ್ಲಿ 12.30ಕ್ಕೆ ಬಜೆಟ್‌ ಮಂಡನೆ

* ‘ಯಶಸ್ವಿನಿ’ ಆರೋಗ್ಯ ಯೋಜನೆ ಮತ್ತೆ ಜಾರಿ

* ಸರ್ಕಾರದಿಂದಲೇ ರೈತರಿಗೆ ವಿಮಾ ಯೋಜನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.