ADVERTISEMENT

ಕೆಎಸ್‌ಎಫ್‌ಸಿಯಲ್ಲಿ ಒಟಿಎಸ್‌ ಜಾರಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 15:47 IST
Last Updated 20 ಜನವರಿ 2023, 15:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ (ಕೆಎಸ್‌ಎಫ್‌ಸಿ) ಅನುತ್ಪಾದಕ ಆಸ್ತಿಯ ಪಟ್ಟಿಯಲ್ಲಿರುವ ₹ 345 ಕೋಟಿ ಸಾಲದ ವಸೂಲಾತಿಗಾಗಿ ಒಂದು ಬಾರಿ ತೀರುವಳಿ (ಒಟಿಎಸ್‌) ಯೋಜನೆ ಜಾರಿಗೊಳಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

‘2003ರ ಅಕ್ಟೋಬರ್‌ 31ರ ಬಳಿಕ ಮಂಜೂರಾತಿಯಾಗಿದ್ದು, ವಸೂಲಾಗದೇ ಇರುವ ₹ 127 ಕೋಟಿ ಅಸಲು ಹಾಗೂ ₹ 217.6 ಕೋಟಿ ಬಡ್ಡಿ ವಸೂಲಿಗೆ ಒಟಿಎಸ್‌ ಜಾರಿಗೊಳಿಸಲು ನಿರ್ಧರಿಸಲಾಗಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಶುಕ್ರವಾರ ಸಂಪುಟ ಸಭೆಯ ಬಳಿಕ ತಿಳಿಸಿದರು.

ಕೆಎಸ್‌ಎಫ್‌ಸಿಗೆ ರಾಜ್ಯ ಸರ್ಕಾರದಿಂದ ₹ 54.60 ಕೋಟಿ ಷೇರು ಬಂಡವಾಳ ಬಿಡುಗಡೆ ಮಾಡುವ ಪ್ರಸ್ತಾವಕ್ಕೂ ಒಪ್ಪಿಗೆ ನೀಡಲಾಗಿದೆ ಎಂದರು.

ADVERTISEMENT

ಸೈನಿಕರ ಪತ್ನಿಯರಿಗೂ ನಿವೇಶನ: ನಗರಾಭಿವೃದ್ಧಿ ಪ್ರಾಧಿಕಾರಗಳು ನಿರ್ಮಿಸುವ ಬಡಾವಣೆಗಳಲ್ಲಿ ಮಾಜಿ ಸೈನಿಕರ ಕೋಟಾದ ಅಡಿಯಲ್ಲಿ ಮೃತ ಸೈನಿಕರ ಪತ್ನಿ ಅಥವಾ ಅವರ ಅವಲಂಬಿತರಿಗೆ ನಿವೇಶನ ಹಂಚಿಕೆ ಮಾಡುವುದಕ್ಕೆ ಅವಕಾಶ ಕಲ್ಪಿಸಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ನಿವೇಶನ ಹಂಚಿಕೆ) ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೂ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

‘ಮಾಜಿ ಸೈನಿಕರು ಅಥವಾ ಮೃತ ಸೈನಿಕರ ಕುಟುಂಬಗಳ ಸದಸ್ಯರು ಅರ್ಜಿ ಸಲ್ಲಿಸಬಹುದು’ ಎಂದು ನಿಯಮಗಳಲ್ಲಿದೆ. ಅದರ ಜತೆಗೆ ‘ಮಾಜಿ ಸೈನಿಕರು ಮತ್ತು ಮೃತ ಸೈನಿಕರ ಪತ್ನಿ ಅಥವಾ ಅವಲಂಬಿತರು’ ಎಂಬ ಪದಗಳನ್ನು ಸೇರಿಸಲು ನಿರ್ಧರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.