ADVERTISEMENT

ಸಚಿವ ಸಂಪುಟ ವಿಸ್ತರಣೆ: ಅತೃಪ್ತಿ ಶಮನಕ್ಕೆ ಯತ್ನ

ಶಾಸಕರೊಂದಿಗೆ ವೇಣುಗೋಪಾಲ್‌ ಚರ್ಚೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 0:52 IST
Last Updated 10 ಜೂನ್ 2019, 0:52 IST
   

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ‘ಮೈತ್ರಿ’ ಸರ್ಕಾರವನ್ನು ಉಳಿಸಿಕೊಳ್ಳಲು ಪಕ್ಷೇತರರಿಗೆ ಮಣೆ ಹಾಕುವ ‘ದೋಸ್ತಿ’ ಪಕ್ಷಗಳ ನಡೆಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಅತೃಪ್ತರನ್ನು ಸಮಾಧಾನಪಡಿಸಲು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಬೆಂಗಳೂರಿಗೆ ಬರಲಿದ್ದಾರೆ.

ರೋಷನ್‌ ಬೇಗ್‌, ರಾಮಲಿಂಗಾ ರೆಡ್ಡಿ ಹಾಗೂ ಬಿ.ಸಿ.ಪಾಟೀಲ ಸೇರಿದಂತೆ ಡಜನ್‌ಗೂ ಹೆಚ್ಚು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅತೃಪ್ತರು ಪದೇ ಪದೇ ಪಕ್ಷಕ್ಕೆ ಮುಜುಗರವಾಗುವಂತೆ ಹೇಳಿಕೆಗಳನ್ನು ನೀಡುವ ಮೂಲಕ ಅಸಮಾಧಾನವನ್ನು ಹೊರ ಹಾಕುತ್ತಿರುವುದು ಪಕ್ಷದ ವರಿಷ್ಠರಿಗೆ ತಲೆನೋವಾಗಿದೆ.

ಅತೃಪ್ತ ಶಾಸಕರನ್ನು ಕರೆಸಿ ಮಾತನಾಡುವ ಮೂಲಕ ಕೋಪ ಶಮನ ಮಾಡಲು ವೇಣುಗೋಪಾಲ್‌ ಸೋಮವಾರ ಇಲ್ಲವೆ ಮಂಗಳವಾರ ಬೆಂಗಳೂರಿಗೆ ಬರಲಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರ ಜತೆ ಚರ್ಚಿಸಲಿದ್ದಾರೆ. ಈ ಸಂದರ್ಭದಲ್ಲಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಜೊತೆಗೆ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ರೋಷನ್‌ ಬೇಗ್‌, ರಾಮಲಿಂಗಾರೆಡ್ಡಿ ಅವರು ಪಕ್ಷಕ್ಕೆ ಮುಜುಗರ ಉಂಟು ಮಾಡುವಂತಹ ಹೇಳಿಕೆ ನೀಡಿದ್ದರಿಂದ ಒಂದಿಬ್ಬರು ಸಚಿವರನ್ನು ಕೈಬಿಟ್ಟು, ಇಬ್ಬರು ಹಿರಿಯ ಶಾಸಕರಿಗೆ ಮುಂಬರುವ ದಿನಗಳಲ್ಲಿ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ.

ಶಾಸಕ ಬಿ.ಸಿ.ಪಾಟೀಲ ಪಕ್ಷದ ಮೇಲೆ ಒತ್ತಡ ಹೇರುವ ತಂತ್ರವಾಗಿ ಪಕ್ಷದಲ್ಲಿ ಲಿಂಗಾಯತ ಸಮುದಾಯವನ್ನು ಕಡೆ
ಗಣಿಸಲಾಗಿದೆ ಎಂದು ಶನಿವಾರ ಆಕ್ರೋಶ ಹೊರಹಾಕಿದ್ದರು.

ಈ ಮಧ್ಯೆ ಶಾಸಕ ರಮೇಶ ಜಾರಕಿಹೊಳಿ ನಡೆ ನಿಗೂಢವಾಗಿದ್ದು, ಅವರ ಸಂಪರ್ಕದಲ್ಲಿರುವ ಶಾಸಕರಾದ ಮಹೇಶ್‌ ಕುಮಠಳ್ಳಿ, ಬಿ.ನಾಗೇಂದ್ರ, ಭೀಮಾನಾಯ್ಕ್‌, ಜೆ.ಎನ್‌.ಗಣೇಶ್‌ ಕೈಕೊಡುವ ಸಾಧ್ಯತೆ ಇರುವ ಕಾರಣ, ಇವರಲ್ಲಿ ಕೆಲವರನ್ನು ಕರೆಸಿ ಮಾತನಾಡಬಹುದು. ಇಲ್ಲವಾದರೆ, ರಮೇಶ ಅತೃಪ್ತರನ್ನು ಬಳಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸುವ ಸಾಧ್ಯತೆ ಇದೆ ಎಂಬ ಭೀತಿಯೂ ವರಿಷ್ಠರಿಗಿದೆ.

ಎಚ್‌ಡಿಕೆ–ಎಚ್‌ಡಿಡಿ ಸಮಾಲೋಚನೆ

ಇದೇ 12ರಂದು ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಎಚ್‌.ಡಿ.ದೇವೇಗೌಡ ಭಾನುವಾರ ಸಮಾಲೋಚನೆ ನಡೆಸಿದರು.

ಇಬ್ಬರು ಪಕ್ಷೇತರರು ಬುಧವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಸ್ಲಿಂ ಕೋಟಾದಡಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್‌ ಅವರಿಗೆ ಸಚಿವ ಸ್ಥಾನ ನೀಡಬೇಕೆ ಎಂಬ ವಿಚಾರ ಇನ್ನೂ ತೀರ್ಮಾನವಾಗಿಲ್ಲ. ಸೋಮವಾರ ಈ ಬಗ್ಗೆ ತೀರ್ಮಾನ ತೆಗೆದುಕೊಂಡರೂ ಅಚ್ಚರಿ ಇಲ್ಲ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಬಿ.ಎಂ.ಫಾರೂಕ್‌ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಈವರೆಗೆ ನನಗೆ ಮಾಹಿತಿ ಇಲ್ಲ. ಸೋಮವಾರ ತಮ್ಮ ಜೊತೆ ಮಾತನಾಡುವಂತೆ ದೇವೇಗೌಡರು ಹೇಳಿದ್ದಾರೆ’ ಎಂದರು.

**

ಆಪರೇಷನ್ ಕಮಲಕ್ಕೆ ಕೈ ಹಾಕುವುದಿಲ್ಲ. ಆಪರೇಷನ್ ಕಮಲದಿಂದ ದೂರವಿರುವಂತೆ ಹೈ ಕಮಾಂಡ್ ಹೇಳಿದೆ

- ಬಿ.ಶ್ರೀರಾಮುಲು, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.