ADVERTISEMENT

ನಿರ್ಬಂಧಿತ ಪ್ರದೇಶದಲ್ಲಿ ಮೋಜು ಮಸ್ತಿ: ಏಳು ಪ್ರವಾಸಿಗರ ವಿರುದ್ಧ ದೂರು ದಾಖಲು

ಜೊಯಿಡಾ: ಮದ್ಯ ಸೇವನೆ, ಬೆಂಕಿ ಹಾಕಿ ಮೋಜು

​ಪ್ರಜಾವಾಣಿ ವಾರ್ತೆ
Published 15 ಮೇ 2019, 16:21 IST
Last Updated 15 ಮೇ 2019, 16:21 IST

ಜೊಯಿಡಾ (ಉತ್ತರ ಕನ್ನಡ):ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂಬಾರವಾಡಾ ವಲಯದ ಕಾಡಿನಲ್ಲಿ ಮದ್ಯ ಸೇವಿಸಿ, ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಏಳುಪ್ರವಾಸಿಗರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರವಾಸಿಗರೂಜೊಯಿಡಾ ಪೊಲೀಸರಿಗೆ ದೂರು ನೀಡಿದ್ದಾರೆ‌.ಅಧಿಕಾರಿಗಳು ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದಾರೆ.

ಧಾರವಾಡದ ಬಸವನಗರ ನಿವಾಸಿ ರವಿಚಂದ್ರ ಎಸ್ ಅಮ್ಮಿನಭಾವಿ, ಹೊಯ್ಸಳ ನಗರದ ಮೋಹನ ಕುಮಾರ ವಿ ಘಾಟಗೆ, ಸಪ್ತಾಪುರದ ಸಂದೀಪ ಚಿರಂಜೀವಿ ಬನೆ,ನವಲಗುಂದ ಅತ್ತಿಕೊಳ್ಳದ ಬಸಪ್ಪ.ಎಸ್, ಜಯನಗರದ ಈಶ್ವರ ಗೌಡ ಟಿ ಪರ್ವತಗೌಡರ,ದ್ಯಾಮಣ್ಣ ಅಣ್ಣಿನಭಾವಿ ಹಾಗೂ ಮುಂಡಗೋಡ ತಾಲ್ಲೂಕಿನ ಮಳಗಿಯನದೀಮ್ ಖಾನ್ ಎಂ.ಲೋಹಾನಿ ವಿರುದ್ಧ ದೂರು ದಾಖಲಾಗಿದೆ.

ಧಾರವಾಡದಿಂದ ಮಂಗಳವಾರ ಬಂದಿದ್ದ ಏಳುಪ್ರವಾಸಿಗರು ಸಮೀಪದ ಕಿರವತ್ತಿಯ ಸೇತುವೆ ಬಳಿ ಮೋಜು, ಮಸ್ತಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದಕುಂಬಾರವಾಡಾ ವಲಯ ಅರಣ್ಯಾಧಿಕಾರಿ ಪ್ರಭುರಾಜ ಪಾಟೀಲ ಮತ್ತು ನಾಲ್ವರು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ನಿರ್ಬಂಧಿತ ಅರಣ್ಯ ಪ್ರದೇಶವನ್ನು ಪ್ರವೇಶಿಸದಂತೆ ಎಚ್ಚರಿಕೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರವಾಸಿಗರು, ಮಾತಿನ ಚಕಮಕಿ ನಡೆಸಿಅಸಭ್ಯವಾಗಿ ಮಾತನಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಸಂಬಂಧ ವಿಚಾರಣೆಗೆಂದು ಕುಂಬಾರವಾಡದ ವಲಯ ಅರಣ್ಯಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದರು. ವಿಚಾರ ತಿಳಿದ ಕೆಲವು ಸ್ಥಳೀಯ ಮುಖಂಡರು,ನೂರಾರು ಗ್ರಾಮಸ್ಥರೊಂದಿಗೆ ಕಚೇರಿ ಎದುರು ಜಮಾಯಿಸಿದರು. ರಾತ್ರಿ 10.30ರವರೆಗೂ ಧರಣಿ ಕುಳಿತರು.ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಇದರಿಂದ ಆಕ್ರೋಶಗೊಂಡಸಿ.ಪಿ.ಐ ರಮೇಶ ಹೂಗಾರ ಮತ್ತು ಸಿಬ್ಬಂದಿ, ಪ್ರತಿಭಟನಾಕಾರರನ್ನು ಚದುರಿಸಿದರು. ಬಳಿಕ ಆರೋಪಿಗಳನ್ನುವೈದ್ಯಕೀಯ ಪರೀಕ್ಷೆಗಾಗಿ ಜೊಯಿಡಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

‘ನಾವು ಹಲ್ಲೆ ಮಾಡಿಲ್ಲ’:ಕುಂಬಾರವಾಡ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಶಿವಾನಂದ ತೋಡ್ಕರ ಪ್ರತಿಕ್ರಿಯಿಸಿ, ‘ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರು ಮಾಂಸಾಹಾರ ಸೇವನೆ, ಮದ್ಯಪಾನ ಮಾಡುತ್ತಿದ್ದರು. ಅಲ್ಲದೇ ಅಲ್ಲಿ ಬೆಂಕಿ ಹಾಕಿದ್ದರು. ಈ ಸಂಬಂಧ ವಿಚಾರಣೆಗೆಂದು ಕರೆದುಕೊಂಡು ಬಂದಾಗ ದುರ್ವರ್ತನೆ ತೋರಿದರು. ನಾವ್ಯಾರೂ ಅವರ ಮೇಲೆ ಹಲ್ಲೆ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಈ ಪ್ರಕರಣ ಸ್ಥಳೀಯರಿಗೆ ಸಂಬಂಧಿಸಿದ್ದೇ ಅಲ್ಲ. ನಮ್ಮ ಅಧಿಕಾರಿಗಳು ಕಾನೂನನ್ನು ಅಚ್ಚುಕಟ್ಟಾಗಿ ಜಾರಿ ಮಾಡುತ್ತಿರುವುದಕ್ಕೆ ಆಕ್ರೋಶಗೊಂಡ ಕೆಲವರು, ಜನ ಸೇರಿಸಿ ಪ್ರತಿಭಟನೆ ಮಾಡಿದ್ದಾರೆ’ ಎಂದುದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.