ಬೆಂಗಳೂರು: ‘ಪಶುವೈದ್ಯಕೀಯ ಮತ್ತು ಪಶು ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಸಂಸ್ಥೆಗಳಲ್ಲಿ ಮತ್ತು ಜಕ್ಕೂರಿನಲ್ಲಿರುವ ಕೇಂದ್ರದ ಜವಾಹರಲಾಲ್ ನೆಹರು ಮುಂದುವರೆದ ಅಧ್ಯಯನ ಸಂಶೋಧನಾ ಸಂಸ್ಥೆಯಲ್ಲಿರುವ ಪ್ರಯೋಗಾಲಯಗಳು ಮತ್ತು ತಜ್ಞ ವಿಜ್ಞಾನಿಗಳನ್ನು ಕೋವಿಡ್-19 ತಪಾಸಣೆಗೆ ಬಳಸಿಕೊಳ್ಳುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.
ಕೋವಿಡ್-19ರ ತಪಾಸಣೆಯಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಅವರನ್ನು ಸೋಮವಾರ ಭೇಟಿ ಮಾಡಿದ ಪಾಟೀಲರು ಈ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಆಗ ಮುಖ್ಯಮಂತ್ರಿ ಈ ಭರವಸೆ ನೀಡಿದರು.
‘ಕೋವಿಡ್ ನಿಯಂತ್ರಣ ಮತ್ತು ಹರಡುವಿಕೆ ತಡೆಗಟ್ಟಲು ತಪಾಸಣೆ ಮತ್ತು ಕ್ವಾರಂಟೈನ್ ಸಿದ್ದ ಔಷಧ. ಆದರೆ, ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತಪಾಸಣೆ ಆಗುತ್ತಿಲ್ಲ. 7,500ಕ್ಕೂ ಹೆಚ್ಚು ತಪಾಸಣಾ ವರದಿ ಬಾಕಿ ಇವೆ. ಏ. 12 ನಂತರ ಸಂಗ್ರಹಿಸಿರುವ ಮಾದರಿಗಳ ಫಲಿತಾಂಶ ಪ್ರಕಟವಾದರೆ ಪ್ರಕರಣ
ಗಳ ಸಂಖ್ಯೆ 2–3 ಪಟ್ಟು ಹೆಚ್ಚುವ ಸಾಧ್ಯತೆಗಳಿವೆ’ ಎಂದೂ ಪಾಟೀಲ ಕಳವಳ ವ್ಯಕ್ತಪಡಿಸಿದ್ದಾರೆ.
‘ಕ್ಷಿಪ್ರಗತಿಯ ಪರೀಕ್ಷೆಯ ಕಿಟ್ಗಳು ರಾಜ್ಯಕ್ಕೆ ಪೂರೈಕೆ ಆಗಿಲ್ಲ. ಹೀಗಾಗಿ, ಇನ್ನೂ ಪರೀಕ್ಷೆ ಆರಂಭವಾಗಿಲ್ಲ’ ಎಂದ ಅವರು, ‘ಜಿಲ್ಲಾ ಕೇಂದ್ರಗಳಲ್ಲಿ ತಪಾಸಣಾ ಕೇಂದ್ರಗಳು ಕಾರ್ಯನಿರ್ವಹಿಸುವಂತೆ ಮಾಡಬೇಕು‘ ಎಂದೂ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.