ಜಾತಿ ಜನಗಣತಿ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿಗೆ ಕೆಲ ಸಮುದಾಯಗಳ ವಿರೋಧದ ಹಿನ್ನಲೆಯಲ್ಲಿ ಶಾಸಕಾಂಗ ಸಭೆ ಕರೆದು ಚರ್ಚಿಸಬೇಕು’ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವರದಿಯ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸರ್ಕಾರ ಆ ಗೊಂದಲವನ್ನು ಬಗೆಹರಿಸಬೇಕು’ ಎಂದರು.
‘ಒಕ್ಕಲಿಗರು ಒಂದು, ಒಂದೂವರೆ ಕೋಟಿ ಇದ್ದೇವೆ ಎನ್ನುತ್ತಿದ್ದಾರೆ. ರಾಜ್ಯದಲ್ಲಿರುವ ಜನಸಂಖ್ಯೆಯಲ್ಲಿ ಅವರ ಸಂಖ್ಯೆಯೇ ಒಂದು ಕೋಟಿಯಾದರೆ ಉಳಿದವರ ಸಂಖ್ಯೆ ಎಷ್ಟಿರಬಹುದೆಂದು ನೀವೇ ಹೇಳಿ’ ಎಂದು ಮರು ಪ್ರಶ್ನೆ ಹಾಕಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಸಮಾಧಾನ ಕುರಿತ ಪ್ರಶ್ನೆಗೆ, ‘ಅವರಿಗೆ ವಯಸ್ಸಾಗಿದೆ, ಏನೇನೋ ಮಾತನಾಡುತ್ತಿದ್ದಾರೆ. ಅವರ ವಾದ, ವಿವಾದ ಇದ್ದೇ ಇರುತ್ತದೆ. ಹಿಂದೆಯೂ ಅದನ್ನೇ ಹೇಳಿದ್ದಾರೆ. ವರದಿಯಲ್ಲಿ ಸಣ್ಣಪುಟ್ಟ ಗೊಂದಲ ಇದ್ದರೆ ಬಗೆಹರಿಸಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.