ADVERTISEMENT

ಕ್ಯಾಸಲ್‌ರಾಕ್‌ ದ್ವಿಪಥ ರೈಲು ಯೋಜನೆಗೆ ಮರುಜೀವ

ಹುಲಿ ಕಾರಿಡಾರ್‌ನಲ್ಲಿ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 20:26 IST
Last Updated 9 ಸೆಪ್ಟೆಂಬರ್ 2022, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ:ಕರ್ನಾಟಕದಕ್ಯಾಸಲ್‌ರಾಕ್‌ನಿಂದ ಗೋವಾದ ಕೊಲ್ಲೆಂವರೆಗಿನ ನೈಋತ್ಯ ರೈಲ್ವೆಯ ಮಾರ್ಗವನ್ನು ಜೋಡಿ ಹಳಿ ಮಾರ್ಗವಾಗಿ ಪರಿವರ್ತಿಸುವ ಯೋಜನೆಗೆ ಮರುಜೀವ ನೀಡಲಾಗಿದೆ.

ಈ ಯೋಜನೆಗೆರಾಷ್ಟ್ರೀಯ ವನ್ಯಜೀವಿ ಮಂಡಳಿ ನೀಡಿದ್ದ ಹಸಿರು ನಿಶಾನೆಯನ್ನು ಸುಪ್ರೀಂ ಕೋರ್ಟ್ 2022ರ ಮೇ 9ರಂದು‌ರದ್ದುಪಡಿಸಿತ್ತು. ಜೋಡಿ ಹಳಿ ಮಾರ್ಗದ ಯೋಜನೆಯ ಪರಿಸರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ನೇಮಿಸಿದ್ದ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ನೀಡಿರುವ ಶಿಫಾರಸುಗಳನ್ನು ಆಧರಿಸಿ ಸುಪ್ರೀಂಕೋರ್ಟ್‌ ಈ ಆದೇಶ ನೀಡಿತ್ತು.

ಈ ಯೋಜನೆಯಿಂದ ಪರಿಸರ ಹಾಗೂ ಜೀವವೈವಿಧ್ಯದ ಪರಿಣಾಮಗಳ ಸಮಗ್ರ ಮೌಲ್ಯಮಾಪನ ನಡೆಸಿ ಹೊಸ ಪ್ರಸ್ತಾವನೆ ಸಲ್ಲಿಸಬಹುದು ಎಂದೂ ಕೋರ್ಟ್‌ ಹೇಳಿತ್ತು. ಈ ಯೋಜನೆ
ಯಿಂದ ವನ್ಯಜೀವಿಗಳ ಆವಾಸಸ್ಥಾನ ಹಾಗೂ ಪರಿಸರದ ಮೇಲಾಗುವ ಪರಿಣಾಮಗಳ ಮೌಲ್ಯಮಾಪನ ನಡೆಸಲು ‘ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ’ ತೀರ್ಮಾನಿಸಿದೆ. ಇದಕ್ಕಾಗಿ ತಜ್ಞ ಸಿಬ್ಬಂದಿಯನ್ನು ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಿದೆ. ಈ ತಜ್ಞರು ಕರ್ನಾಟಕ, ಗೋವಾದ ಪಶ್ಚಿಮಘಟ್ಟದ ಅರಣ್ಯಗಳಲ್ಲಿ ಅಧ್ಯಯನ ನಡೆಸಿ ವರದಿ ನೀಡಲಿದ್ದಾರೆ.

ADVERTISEMENT

ಈರೈಲು ಮಾರ್ಗ ಹಾದುಹೋಗಿರುವಪಶ್ಚಿಮ ಘಟ್ಟಗಳು ಯುನೆಸ್ಕೊ ಅನುಮೋದಿಸಿರುವ ಪರಿಸರ ಸೂಕ್ಷ್ಮ ಪ್ರದೇಶವನ್ನು ಒಳಗೊಂಡಿದೆ.ಅಲ್ಲಿ ಹೆಚ್ಚುವರಿ ರೈಲು ಹಳಿ ಹಾದುಹೋದರೆ, ವನ್ಯಜೀವಿ ಮತ್ತು ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಿಇಸಿ ತನ್ನ ವರದಿಯಲ್ಲಿ ತಿಳಿಸಿತ್ತು.

ಈ ಯೋಜನೆಯು ಹುಲಿ ಕಾರಿಡಾರ್‌ನಲ್ಲಿ ಸಾಗುತ್ತದೆ. ಅಲ್ಲದೇ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಕಾಮಗಾರಿ ನಡೆಸಬೇಕಾಗುತ್ತದೆ. ಇದರಿಂದ ಹುಲಿ ಸಂತತಿಗೆ ತೊಂದರೆಯಾಗಬಹುದು ಎಂದು ಸಿಇಸಿ ಅಭಿಪ್ರಾಯಪಟ್ಟಿತ್ತು.

ದ್ವಿಪಥ ರೈಲು ಯೋಜನೆಗಾಗಿ ಸಂರಕ್ಷಿತ ಅರಣ್ಯದ 120 ಹೆಕ್ಟೇರ್, ಸಂರಕ್ಷಿತವಲ್ಲದ ಅರಣ್ಯ ಪ್ರದೇಶದ 114 ಹೆಕ್ಟೇರ್ ಹಾಗೂ ಮೀಸಲು ಅರಣ್ಯದ ಏಳು ಹೆಕ್ಟೇರ್‌ ಪ್ರದೇಶವನ್ನು ಬಳಸಿಕೊಳ್ಳಲು 2019ರಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಈ ಯೋಜನೆಯು ಭಗವಾನ್‌ ಮಹಾವೀರ ವನ್ಯಜೀವಿ ಧಾಮದ ಮೂಲಕ ಹಾದು ಹೋಗಲಿದೆ.

‘ಈ ಯೋಜನೆಯಿಂದ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸಂಪರ್ಕಿಸುವ ಹುಲಿ ಕಾರಿಡಾರ್‌ನಲ್ಲಿ ಹುಲಿ ಸಂರಕ್ಷಣೆಗೆ ಧಕ್ಕೆ ಉಂಟಾಗಲಿದೆ. ಪಶ್ಚಿಮ ಘಟ್ಟಗಳಲ್ಲಿ ಈಗಾಗಲೇ ಭೂಕುಸಿತ ಪ್ರಕರಣಗಳು ಹೆಚ್ಚಿವೆ. ಒಂದು ವೇಳೆ ಈ ಯೋಜನೆ ಜಾರಿಯಾದರೆ ಭೂಕುಸಿತ ಪ್ರಕರಣಗಳು ಮತ್ತಷ್ಟು ಹೆಚ್ಚಲಿವೆ’ ಎಂದು ಕರ್ನಾಟಕದ ವನ್ಯಜೀವಿ ಕಾರ್ಯಕರ್ತ ಗಿರಿಧರ್ ಕುಲಕರ್ಣಿ ಎಚ್ಚರಿಸಿದರು.

ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಇಲ್ಲಿ, ಹಳಿ ದ್ವಿಪಥ ಕಾಮಗಾರಿಗಾಗಿ ಮತ್ತಷ್ಟು ಗುಡ್ಡ ಕೊರೆಯಬೇಕು. ಮರಗಳನ್ನು ಕಡಿಯಬೇಕು. ಸೇತುವೆಗಳನ್ನು ಹಾಗೂಸುರಂಗಗಳನ್ನು ಮಾಡಬೇಕಾಗುತ್ತದೆ. ಇದರಿಂದ ಪರಿಸರ ಸಮತೋಲನದ ಮೇಲೆ ದೊಡ್ಡ ವ್ಯತಿರಿಕ್ತ ಪರಿಣಾಮ ಆಗಲಿದೆ ಎಂದು ವನ್ಯಜೀವಿ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.