ವಡಗೇರಾ ಪಟ್ಟಣದ ದನಗಾಹಿಗಳು ಜಾನುವಾರು ಮೇಯಿಸಲು ಕರೆದೊಯ್ಯುತ್ತಿರುವುದು
ವಡಗೇರಾ (ಯಾದಗಿರಿ ಜಿಲ್ಲೆ): ‘ದನ ಕಾಯೋನು’ ಎಂದು ಈ ಹಿಂದೆ ಮೂದಲಿಸುತ್ತಿದ್ದವರೇ ಈಗ ಇವರು ಮಾಡುವ ‘ಕಾಯಕ’ದಿಂದ ಗಳಿಸುತ್ತಿರುವ ಆದಾಯ ಕಂಡು ಹುಬ್ಬೇರಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ದನಗಾಹಿಗಳು ಜಾನುವಾರು ಮೇಯಿಸುವುದು ಹಾಗೂ ಕಾಯುವ ಮೂಲಕ ತಿಂಗಳಿಗೆ ₹30 ಸಾವಿರದವರೆಗೂ ಆದಾಯ ಗಳಿಸುತ್ತಿದ್ದಾರೆ.
ಪಟ್ಟಣದಲ್ಲಿ ನೂರಾರು ಮಂದಿ ಜಾನುವಾರು ಸಾಕಾಣಿಕೆ ಮಾಡುತ್ತಿದ್ದಾರೆ. ಅವುಗಳನ್ನು ಕಾಯಲು, ಮೇಯಿಸಲು ಎರಡ್ಮೂರು ದನಗಾಹಿಗಳ ತಂಡಗಳಿವೆ. ಒಂದೊಂದು ತಂಡದಲ್ಲಿ ಇಬ್ಬರು ಅಥವಾ ಮೂವರು ದನಗಾಹಿಗಳಿದ್ದಾರೆ. ಪ್ರತಿ ತಂಡವೂ 100ರಿಂದ 150 ದನಗಳನ್ನು ಮೇಯಿಸುತ್ತದೆ.
ಬೆಳಿಗ್ಗೆ 9 ಗಂಟೆಗೆ ಮಾಲೀಕರು ತಮ್ಮ ಜಾನುವಾರನ್ನು ನಿರ್ದಿಷ್ಟ ಜಾಗಕ್ಕೆ ತಂದು ಬಿಡಬೇಕು. ಎಲ್ಲ ದನಗಳು ಬಂದ ನಂತರ ದನಗಾಹಿಗಳು ದನ ಮೇಯಿಸಲು ಜಮೀನುಗಳಿಗೆ ಹೊಡೆದುಕೊಂಡು ಹೋಗುತ್ತಾರೆ. ಸಂಜೆ ಮತ್ತೆ ನಿಗದಿತ ಸ್ಥಳಕ್ಕೆ ತಂದು ಬಿಡುತ್ತಾರೆ. ಇದು ದನಗಾಹಿಗಳ ನಿತ್ಯದ ಕಾಯಕ.
ಕಾಯಲು ದರ ನಿಗದಿ: ಈ ಹಿಂದೆ ದನಗಾಹಿಗಳಿಗೆ ತಿಂಗಳ ಕೂಲಿ ಎಂದು ₹30ರಿಂದ ₹50 ನೀಡ
ಲಾಗುತ್ತಿತ್ತು. ಜತೆಗೆ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಆಹಾರ ಹಾಗೂ ಹೊಸ ಬಟ್ಟೆ ನೀಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ತಿಂಗಳಿಗೆ ಒಂದು ಎಮ್ಮೆಗೆ ₹600, ಆಕಳಿಗೆ ₹550, ಕರುವಿಗೆ ₹300
ಕೂಲಿ ದರ ನಿಗದಿಪಡಿಸಿದ್ದಾರೆ. ಪ್ರತಿ ತಿಂಗಳು ದನಗಾಹಿಗಳ ತಂಡ ₹50,000ದಿಂದ ₹75,000 ಗಳಿಸುತ್ತಿದೆ.
ಗೊಬ್ಬರದಿಂದಲೂ ಆದಾಯ: ನಿಗದಿಪಡಿಸಿದ ಸ್ಥಳದಲ್ಲಿ ದನಗಳು ಹಾಕಿರುವ ಸಗಣಿಯನ್ನು ಸಂಗ್ರಹಿಸಿ ತಿಪ್ಪೆಗೆ ಹಾಕುತ್ತಾರೆ. ವರ್ಷದ ನಂತರ ಅದನ್ನು ಜಮೀನು ಇರುವ ರೈತರಿಗೆ, ಟ್ರ್ಯಾಕ್ಟರ್ನ ಒಂದು ಲೋಡ್ಗೆ ₹3 ಸಾವಿರದಂತೆ ಮಾರಾಟ
ಮಾಡುತ್ತಾರೆ. ಹೀಗೆ ಸಂಗ್ರಹಿಸುವ ಸಗಣಿ 5ರಿಂದ 6 ಲೋಡ್ಗಳಷ್ಟು ಆಗುತ್ತದೆ ಎಂದು ದನಗಾಹಿಗಳು ಹೇಳುತ್ತಾರೆ.
‘ಈ ಹಿಂದೆ ಶಾಲೆಯಲ್ಲಿ ಮಕ್ಕಳು ಏನಾದರೂ ತಪ್ಪು ಮಾಡಿದರೆ, ಸರಿಯಾಗಿ ಓದು- ಬರಹ ಬಾರದಿದ್ದರೆ ಮಕ್ಕಳಿಗೆ ದನ ಕಾಯಲು ಹೋಗು ಎಂದು ಶಿಕ್ಷಕರು ಅಪಹಾಸ್ಯ ಮಾಡುತ್ತಿದ್ದರು. ಈಗ ದನ ಕಾಯುವವರೂ ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆಯ ಶಿಕ್ಷಕರಿಗಿಂತಲೂ ಹೆಚ್ಚಿನ ಹಣ ಗಳಿಸುತ್ತಿದ್ದಾರೆ’ ಎನ್ನುತ್ತಾರೆ ದನಗಳ ಮಾಲೀಕ ಶಿವಕುಮಾರ ಕೊಂಕಲ್.
‘ಎರಡ್ಮೂರು ದಶಕಗಳ ಹಿಂದೆ ಆಕಳು ಕರು ಹಾಕಿದರೆ, ಊರ ಜಾತ್ರೆ, ದಸರಾ, ದೀಪಾವಳಿ, ಮನೆ ಯಲ್ಲಿ ಶುಭ ಕಾರ್ಯಗಳು ನಡೆದರೆ ದನ ಕಾಯುವವರಿಗೆ ಹೊಸ ಬಟ್ಟೆ, ಹೊಸ ಚಪ್ಪಲಿ ಕೊಟ್ಟು ಅವರನ್ನು ಮನೆಗೆ ಕರೆಯಿಸಿ ಊಟ ಹಾಕಿಸುವ ಪರಿಪಾಟವಿತ್ತು. ಈಗ ಅದೆಲ್ಲವೂ ನಿಂತಿದೆ. ದನಕಾಯುವವರು ಎಲ್ಲದಕ್ಕೂ ಹಣವನ್ನೇ ಕೇಳುತ್ತಾರೆ’ ಎಂದು ಹೇಳುತ್ತಾರೆ.
ಯಾದಗಿರಿ ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ಹೊಲಕ್ಕೆ ಸಗಣಿ, ಉಳುಮೆಗೆ ಎತ್ತುಗಳು, ಹೈನುಗಾರಿಕೆ ಹಾಗೂ ನಿತ್ಯದ ಖರ್ಚಿಗೆ ಆಕಳು, ಎಮ್ಮೆಗಳನ್ನು ಇಲ್ಲಿನ ರೈತರು ಸಾಕುವುದು ಸಾಮಾನ್ಯವಾಗಿದೆ. ಮೇವಿಗೆ ಪೂರಕ ವಾದ ಕುರುಚಲು ಬೆಟ್ಟಗಳು, ಕೃಷ್ಣಾ ಮತ್ತು ಭೀಮಾ ನದಿ, ಹಳ್ಳಗಳು ಸಹ ಜಾನುವಾರು ಸಾಕಾಣಿಕೆಗೆ ಆಸರೆಯಾಗಿವೆ.
ಇಂದಿನ ತುಟ್ಟಿ ಕಾಲದಲ್ಲಿ ಪ್ರತಿಯೊಂದರ ಬೆಲೆಯೂ ಏರಿಕೆಯಾಗಿದೆ. ಹೀಗಾಗಿ ದನ ಕಾಯಲು ಕೂಲಿ ದರ ನಿಗದಿ ಮಾಡಿದ್ದೇವೆ. ನಿತ್ಯ 200 ದನಗಳನ್ನು ಕಾಯುತ್ತೇವೆಬಂದಪ್ಪ ಬಾಡದ,ವಡಗೇರಾ
ದನಗಾಹಿಗಳಿಗೆ ಮುಂಗಡವಾಗಿ ಒಂದು ವರ್ಷದ ಹಣ ಪಾವತಿಸಬೇಕು. ಆಗ ಮಾತ್ರ ಅವರು ದನ ಕಾಯಲು ಹೊಡೆದುಕೊಂಡು ಹೋಗುತ್ತಾರೆಭೀಮನಗೌಡ ಪಾಟೀಲ, ಕರಿಕಳ್ಳಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.