ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು, ಕೊಲೆಗೆ ಬಳಕೆಯಾಗಿತ್ತು ಎನ್ನಲಾದ ಕಪ್ಪು ಬಣ್ಣದ ಕಾರಿನ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೂರು ಪ್ರತ್ಯೇಕ ತಂಡಗಳ ರಚನೆ ಮಾಡಿ ತನಿಖೆ ಕೈಗೊಂಡಿರುವ ಸಿಬಿಐ ಅಧಿಕಾರಿಗಳು, ಆರೋಪಿ ವಿನಾಯಕ ಕಟಗಿಯನ್ನು ನಿತ್ಯವೂ ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅದರಂತೆ ಇಲ್ಲಿನ ಜರ್ಮನ್ ಆಸ್ಪತ್ರೆ ವೃತ್ತದಲ್ಲಿರುವ ಪೊಲೀಸ್ ಅತಿಥಿಗೃಹದಲ್ಲಿ ಗುರುವಾರವೂ ವಿನಾಯಕ ಕಟಗಿಯನ್ನು ಕರೆಯಿಸಿದ ಅಧಿಕಾರಿಗಳು ಹಲವು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹತ್ಯೆಗೆ ಹಂತಕರು ಬಳಸಿದ್ದರು ಎನ್ನಲಾದ ಚಂದ್ರು ಪೂಜಾರ ಎಂಬುವವರಿಗೆ ಸೇರಿದೆ ಎನ್ನಲಾದ ಕಪ್ಪು ಬಣ್ಣದ ಷವರ್ಲೆ ಕಾರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಅದರ ಇಂಚಿಂಚಿನ ಮಾಹಿತಿ ಕಲೆ ಹಾಕಿ ಅವುಗಳ ಚಿತ್ರಗಳನ್ನು ದಾಖಲಿಸಿಕೊಳ್ಳುತ್ತಿದ್ದ ದೃಶ್ಯ ಗುರುವಾರ ಕಂಡುಬಂತು.
ಬಿಎಸ್ಎನ್ಎಲ್ ಕಚೇರಿಗೆ ಭೇಟಿ ನೀಡಿದ ಅಧಿಕಾರಿಗಳು ಕಳೆದ ಮೂರು ವರ್ಷಗಳ ಕಾಲ್ ರೆಕಾರ್ಡರ್ ಪಡೆದಿದ್ದಾರೆ. ಕೊಲೆಗೂ ಮುನ್ನ ಹಂತಕರು ತಂಗಿದ್ದ ಲಾಡ್ಜ್ಗಳು ಹಾಗೂ ತಿರುಗಾಡಿದ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗೆ ಕರೆ ಮಾಡಿದ ವ್ಯಕ್ತಿಗಳ ಮಾಹಿತಿಯನ್ನೂ ಸಂಗ್ರಹಿಸಿರುವ ಸಿಬಿಐ ಅಧಿಕಾರಿಗಳು ಅಂಥ 80ಕ್ಕೂ ಹೆಚ್ಚು ಜನರ ಪಟ್ಟಿಯನ್ನು ಸಿದ್ಧಪಡಿಸಿ, ವಿಚಾರಣೆಗೆ ಕರೆಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.