ಗದಗ: ‘ಡಿ.ಜೆ.ಹಳ್ಳಿ ಗಲಭೆ ಕಾವಲ್ಭೈರಸಂದ್ರಕ್ಕೆ ವಿಸ್ತರಣೆಯಾದ ಸಂದರ್ಭದಲ್ಲಿ ಅನ್ಯ ಕೋಮಿನ ಯುವಕರು ಹಿಂದೂ ದೇಗುಲ ರಕ್ಷಣೆ ಮಾಡಿದ್ದು ಕೂಡ ಒಂದು ನಾಟಕ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಇಲ್ಲಿ ಟೀಕಿಸಿದರು.
‘ಹಿಂದೂ ದೇಗುಲವನ್ನು ಹಾಳು ಮಾಡಲು ಹೊರಟಿದ್ದು ಯಾವ ಸಮುದಾಯದವರು? ಆ ದೇವಸ್ಥಾನವನ್ನು ಯಾರಿಂದ, ಯಾರು ರಕ್ಷಣೆ ಮಾಡಿದರು? ರಾಜ್ಯದ ಜನತೆಗೆ ಎಲ್ಲವೂ ತಿಳಿದಿದೆ. ನಾಟಕ ಆಡಲು ಒಂದು ಇತಿ ಮಿತಿ ಇರಬೇಕು’ ಎಂದು ಕಿಡಿಕಾರಿದರು.
ನಂತರ ಅವರ ಮಾತು ಶಾಸಕ ಜಮೀರ್ ಅಹಮದ್ ಖಾನ್ ಅವರತ್ತ ಹೊರಳಿತು.
‘ಒಬ್ಬೊಬ್ಬರಿಗೂ ಒಂದೊಂದು ಆಶಯ ಇರುತ್ತದೆ. ಶಾಸಕ ಜಮೀರ್ಗೆ ಆ ಸಮುದಾಯಕ್ಕೆ ತಾನೇ ಅಗ್ರಗಣ್ಯ ನಾಯಕನಾಗಬೇಕು ಎಂಬ ಆಸೆ ಇದೆ. ಅದಕ್ಕಾಗಿ ಈ ರೀತಿ ಮಾಡುತ್ತಾರೆ. ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿ ಜೈಲು ಸೇರಿದ್ದ ಆರೋಪಿಗಳು ಬೇಲ್ ಮೇಲೆ ಹೊರಬಂದ ಸಂದರ್ಭದಲ್ಲಿ ಇದೇ ಜಮೀರ್ ಸನ್ಮಾನ ಮಾಡಿದ್ದರು. ಅವರೇನು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರೇ? ಸಾರ್ವಜನಿಕ ಜೀನವಕ್ಕೆ ಭಂಗ ತಂದು, ಆಸ್ತಿ ಪಾಸ್ತಿ ನಷ್ಟ ಮಾಡಿದ ಕಿಡಿಗೇಡಿಗಳನ್ನು ಸನ್ಮಾನಿಸುವುದು ಜಮೀರ್ ಮನಸ್ಥಿತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷ ಕೇವಲ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ’ ಎಂದು ಲೇವಡಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.