ADVERTISEMENT

ನಂಜನಗೂಡು: ಅಪಾರ ಭಕ್ತರ ನಡುವೆ ‘ನಂಜುಂಡನ ದೊಡ್ಡ ಜಾತ್ರೆ’

ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ಪಂಚ ಮಹಾರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 4:54 IST
Last Updated 2 ಏಪ್ರಿಲ್ 2023, 4:54 IST
ನಂಜನಗೂಡಿನಲ್ಲಿ ಭಾನುವಾರ ಬೆಳಿಗ್ಗೆ ನಡೆದ ಶ್ರೀಕಂಠೇಶ್ವರ ಪಂಚ ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.
ನಂಜನಗೂಡಿನಲ್ಲಿ ಭಾನುವಾರ ಬೆಳಿಗ್ಗೆ ನಡೆದ ಶ್ರೀಕಂಠೇಶ್ವರ ಪಂಚ ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.   

ನಂಜನಗೂಡು: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ರಥೋತ್ಸವ ಭಾನುವಾರ ಬೆಳಿಗ್ಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ನಿರೀಕ್ಷೆಗೂ ಮೀರಿ ಬಂದಿದ್ದ ಭಕ್ತರು ಮಹೋತ್ಸವವನ್ನು ಕಣ್ತುಂಬಿಕೊಂಡು ಧನ್ಯತಾಭಾವದಲ್ಲಿ ಮಿಂದರು. ಹಣ್ಣು–ದವನ ಎಸೆದು ಹರಕೆ ತೀರಿಸಿದರು.

ಮುಂಜಾನೆ ದೇವಾಲಯದಲ್ಲಿ ಶ್ರೀಕಂಠೇಶ್ವರ ಸ್ವಾಮಿಗೆ ಕ್ಷೀರಾಭಿಷೇಕ, ಫಲಪಂಚಾಮೃತಾಭಿಷೇಕ, ಮಹೋನ್ನತ ಪೂರ್ವಕ ಏಕದಶಾವರ ರುದ್ರಾಭಿಷೇಕ, ಪ್ರಾತಃಕಾಲ ಪೂಜೆ ನಡೆಯಿತು. ನಂತರ, ಋತ್ವಿಕರು ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇವಾಲಯದ ಮುಂಭಾಗದ ಪೀಠಕ್ಕೆ ಹೊತ್ತು ತಂದರು. ಮಹೂರ್ತದ ಸಮಯಕ್ಕೆ ಸರಿಯಾಗಿ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಶಾಸಕ ಬಿ.ಹರ್ಷವರ್ಧನ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರಥಕ್ಕೆ ಪೂಜೆ ಸಲ್ಲಿಸಿ ಚಕ್ರಗಳಿಗೆ ಈಡು
ಗಾಯಿ ಹೊಡೆದು ಉತ್ಸವಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ 6.35 ಕ್ಕೆ ಭಕ್ತರು ಹರ್ಷೋದ್ಗಾರ, ಜೈಕಾರಗಳ ನಡುವೆ ರಥಗಳನ್ನು ಎಳೆದರು. ಬೆಳಿಗ್ಗೆ 9ಕ್ಕೆ ಪಂಚರಥಗಳು ಸ್ವಸ್ಥಾನ ಸೇರಿದವು.

ADVERTISEMENT

ಅಲಂಕೃತ ಗೌತಮ ರಥವನ್ನು ಕಣ್ತುಂಬಿಕೊಳ್ಳಲು ಕಾದಿದ್ದ ಭಕ್ತರು ಶ್ರೀಕಂಠೇಶ್ವರಸ್ವಾಮಿ ಉತ್ಸವಮೂರ್ತಿ ಕಂಡು ಭಾವಪರವಶರಾದರು. ವರ್ಣಮಯ ಅಲಂಕಾರಿಕ ಬಟ್ಟೆ, ಹೂವು, ಧ್ವಜಗಳಿಂದ ಸಿಂಗರಿಸಲಾಗಿದ್ದ ರಥದಲ್ಲಿ ಹೂವಿನಿಂದ ಬಿಡಿಸಲಾಗಿದ್ದ ‘ಶ್ರೀ ಶ್ರೀಕಂಠೇಶ್ವರ ರಥೋತ್ಸವ’ ಫಲಕ ವಿಶೇಷ ಗಮನ ಸೆಳೆಯಿತು.

ಮೊದಲು ಗಣಪತಿ ರಥ, ನಂತರ ಗೌತಮ ರಥ ಸಾಗಿತು. ಬಳಿಕ ಚಂಡೀಕೇಶ್ವರ ಹಾಗೂ ಸುಬ್ರಹ್ಮಣ್ಯ ರಥ ತೆರಳಿದವು. ಕೊನೆಯಲ್ಲಿ ಪಾರ್ವತಿ ದೇವಿ ರಥ ಸಾಗಿತು. ಗೌತಮ ರಥ ಸುಮಾರು ಎರಡೂವರೆ ತಾಸಿನಲ್ಲಿ ಸ್ವಸ್ಥಾನಕ್ಕೆ ಮರಳಿದರೆ, ಪಾರ್ವತಿದೇವಿ ರಥ ಒಂದೂವರೆ ತಾಸಿನಲ್ಲಿ ಸ್ವಸ್ಥಾನಕ್ಕೆ ತಲುಪಿತು. ಸುಮಾರು ನಾಲ್ಕು ತಾಸುಗಳ ಕಾಲ ರಥಬೀದಿ ಪಂಚ ರಥಗಳು ವಿರಾಜಮಾನವಾಗಿ ಸಾಗಿ ಭಕ್ತರ ಮನಸೂರೆಗೊಂಡವು. ಐದು ರಥಗಳು ರಥದ ಬೀದಿಗಳಲ್ಲಿ ಚಲಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೆರದಿದ್ದ ಲಕ್ಷಾಂತರ ಭಕ್ತರು ಹಣ್ಣು-ದವನ ಎಸೆದು ಹರಕೆ ತೀರಿಸಿದರು. ನವವಧುವರರು ಇಷ್ಟಾರ್ಥ ನೆರವೇರಿಸುವಂತೆ ಕೋರಿಕೊಂಡರು.

ಪ್ರಸಾದ ವಿನಿಯೋಗ: ಜಾತ್ರೆಗೆ ಬಂದ ಭಕ್ತರಿಗೆ ಹಲವು ಸೇವಾ ಸಂಘ ಸಂಸ್ಥೆಗಳ ಕಾರ್ಯಕರ್ತರು ದೇವಾಲಯದ ಆವರಣ, ರಥಬೀದಿ, ರಾಷ್ಟ್ರಪತಿ ರಸ್ತೆ, ಬಜಾರ್ ರಸ್ತೆ, ಎಂಜಿಎಸ್ ರಸ್ತೆಗಳಲ್ಲಿ ಉಪಾಹಾರ, ಹಣ್ಣುಹಂಪಲು, ಶುದ್ಧ ಕುಡಿಯುವ ನೀರು, ಮಜ್ಜಿಗೆ, ಪಾನಕ ನೀಡಿದರು. ಬೈಪಾಸ್‌ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಸ್ನಾನಘಟ್ಟದಲ್ಲಿ ಸಾವಿರಾರು ಭಕ್ತರು ದೈವಕ್ಕೆ ಮುಡಿ ನೀಡಿ ಮಿಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.