ADVERTISEMENT

ಮಾತೃಭಾಷೆ ಕಡ್ಡಾಯಕ್ಕೆ ಕೇಂದ್ರದ ಅಸಹಕಾರ

7 ವರ್ಷದಿಂದ ಬಾಕಿ ಉಳಿದಿರುವ ಮಸೂದೆ ಹಿಂಪಡೆಯುವಂತೆ ಒತ್ತಡ

ವಿ.ಎಸ್.ಸುಬ್ರಹ್ಮಣ್ಯ
Published 4 ಜನವರಿ 2023, 21:24 IST
Last Updated 4 ಜನವರಿ 2023, 21:24 IST
   

ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿ ಒಂದರಿಂದ ಐದನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತೃಭಾಷಾ ಮಾಧ್ಯಮದಲ್ಲೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಲು ರಾಜ್ಯ ವಿಧಾನಮಂಡಲದ ಉಭಯ ಸದನಗಳು 2015ರಲ್ಲಿ ಅಂಗೀಕರಿಸಿದ್ದ ಮಸೂದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ನಿರಂತರ ಒತ್ತಡ ಹೇರುತ್ತಿದೆ.

ರಾಜ್ಯ ಸರ್ಕಾರವು ಮಾನ್ಯತೆ ನೀಡಿದ ಎಲ್ಲ ಶಾಲೆಗಳಲ್ಲಿ ಒಂದರಿಂದ ಐದನೆ ತರಗತಿಯವರೆಗೆ ಮಾತೃಭಾಷೆ ಅಥವಾ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಿ 1994ರಲ್ಲಿ ಭಾಷಾ ನೀತಿಯನ್ನು ಜಾರಿಗೊಳಿಸಲಾಗಿತ್ತು. ಆದರೆ, ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ವ್ಯವಸ್ಥಾಪನಾ ಸಂಘಟನೆಯು ಭಾಷಾ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ರಾಜ್ಯ ಹೈಕೋರ್ಟ್‌ ಭಾಷಾ ನೀತಿಯನ್ನು ರದ್ದುಗೊಳಿಸಿತ್ತು.

ಸುಪ್ರೀಂ ಕೋರ್ಟ್‌ನಲ್ಲೂ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ಭಾಷಾ ನೀತಿಯನ್ನು ರದ್ದುಗೊಳಿಸಿದ್ದ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಎತ್ತಿ ಹಿಡಿದಿತ್ತು. ತೀರ್ಪು ಮರುಪರಿಶೀಲನೆಗೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್‌ ಪರಿಶೀಲನಾ ಅರ್ಜಿಯನ್ನೂ ಸುಪ್ರೀಂ ಕೋರ್ಟ್‌ 2014ರಲ್ಲಿ ವಜಾಗೊಳಿಸಿತ್ತು.

ADVERTISEMENT

ಕೇಂದ್ರದ ಕಾಯ್ದೆಗೆ ತಿದ್ದುಪಡಿ: ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಶಿಕ್ಷಣ ತಜ್ಞರು, ಕಾನೂನು ತಜ್ಞರು, ಸಾಹಿತಿಗಳು ಮತ್ತು ಬರಹಗಾರರ ಅಭಿಪ್ರಾಯ ಸಂಗ್ರಹಿಸಿದ್ದ ರಾಜ್ಯ ಸರ್ಕಾರ, ಸಂವಿಧಾನದ 350–ಎ ವಿಧಿಯಲ್ಲಿನ ಅವಕಾಶವನ್ನು ಬಳಸಿಕೊಂಡು ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿತ್ತು. ಅದಕ್ಕೆ ಪೂರಕವಾಗಿ ಕೇಂದ್ರದ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು ಕಾಯ್ದೆ–2009’ರ ಸೆಕ್ಷನ್‌ 29 (2)(ಎಫ್‌)ಗೆ ತಿದ್ದುಪಡಿ ತರುವ ಮಸೂದೆಗೆ ವಿಧಾನಮಂಡಲದ ಒಪ್ಪಿಗೆ ಪಡೆಯಲಾಗಿತ್ತು.

ಕಾಯ್ದೆಯ ಸೆಕ್ಷನ್‌ 29 (2)(ಎಫ್‌)ನಲ್ಲಿ ‘ಶಿಕ್ಷಣ ಮಾಧ್ಯಮವು ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಮಕ್ಕಳ ಮಾತೃಭಾಷೆಯಲ್ಲಿರತಕ್ಕದ್ದು’ ಎಂಬ ಅಂಶವಿದೆ. ಅದರಲ್ಲಿ ‘ಸಾಧ್ಯವಾಗಬಹುದಾದಷ್ಟು ಮಟ್ಟಿಗೆ’ ಎಂಬ ಪದವನ್ನು ಕಾಯ್ದೆಯಿಂದ ಕೈಬಿಡುವ ತಿದ್ದುಪಡಿ ಮಸೂದೆಯನ್ನು 2015ರಲ್ಲಿ ರಾಜ್ಯ ವಿಧಾನಮಂಡಲದಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು.

ಆರಂಭದಿಂದಲೂ ಆಕ್ಷೇಪ: ರಾಜ್ಯಪಾಲರು ರಾಷ್ಟ್ರಪತಿಯವರ ಅಂಕಿತ ಪಡೆಯುವುದಕ್ಕಾಗಿ ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದರು. ಗೃಹ ಇಲಾಖೆಯು ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕಳುಹಿಸಿತ್ತು. ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿರುವ ಅವಕಾಶ, ತ್ರಿಭಾಷಾ ಸೂತ್ರ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ಕೇಂದ್ರದ ವಿವಿಧ ಇಲಾಖೆಗಳು ಈ ಮಸೂದೆಯ ಕುರಿತು ಸ್ಪಷ್ಟನೆ ನೀಡುವಂತೆ ರಾಜ್ಯಕ್ಕೆ ಸೂಚಿಸಿದ್ದವು. ಹಲವು ಬಾರಿ ಸ್ಪಷ್ಟನೆಗಳನ್ನು ನೀಡಿದ ಬಳಿಕವೂ ಒಪ್ಪಿಕೊಂಡಿರಲಿಲ್ಲ.

ಅದಕ್ಕೆ ಪೂರಕ ವಾಗಿ ಕೇಂದ್ರದ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು ಕಾಯ್ದೆ–2009’ರ ಸೆಕ್ಷನ್‌ 29 (2)(ಎಫ್‌)ಗೆ ತಿದ್ದುಪಡಿ ತರುವ ಮಸೂದೆಗೆ ವಿಧಾನಮಂಡಲದ ಒಪ್ಪಿಗೆ ಪಡೆಯಲಾಗಿತ್ತು.

ಕಾಯ್ದೆಯ ಸೆಕ್ಷನ್‌ 29 (2)(ಎಫ್‌)ನಲ್ಲಿ ‘ಶಿಕ್ಷಣ ಮಾಧ್ಯಮವು ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಮಕ್ಕಳ ಮಾತೃಭಾಷೆಯಲ್ಲಿರತಕ್ಕದ್ದು’ ಎಂಬ ಅಂಶವಿದೆ. ಅದರಲ್ಲಿ ‘ಸಾಧ್ಯವಾಗಬಹು ದಾದಷ್ಟು ಮಟ್ಟಿಗೆ’ ಎಂಬ ಪದವನ್ನು ಕಾಯ್ದೆಯಿಂದ ಕೈಬಿಡುವ ತಿದ್ದುಪಡಿ ಮಸೂದೆಯನ್ನು 2015ರಲ್ಲಿ ರಾಜ್ಯ ವಿಧಾನಮಂಡಲದಲ್ಲಿ ಮಂಡಿಸಿ ಅಂಗೀ ಕಾರ ಪಡೆಯಲಾಗಿತ್ತು.

ಆರಂಭದಿಂದಲೂ ಆಕ್ಷೇಪ: ರಾಜ್ಯ ಪಾಲರು ರಾಷ್ಟ್ರಪತಿಯವರ ಅಂಕಿತ ಪಡೆ ಯುವುದಕ್ಕಾಗಿ ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದರು. ಗೃಹ ಇಲಾಖೆಯು ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕಳುಹಿಸಿತ್ತು. ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿರುವ ಅವಕಾಶ, ತ್ರಿಭಾಷಾ ಸೂತ್ರ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ಕೇಂದ್ರದ ವಿವಿಧ ಇಲಾಖೆಗಳು ಈ ಮಸೂದೆಯ ಕುರಿತು ಸ್ಪಷ್ಟನೆ ನೀಡು ವಂತೆ ರಾಜ್ಯಕ್ಕೆ ಸೂಚಿಸಿದ್ದವು. ಹಲವು ಬಾರಿ ಸ್ಪಷ್ಟನೆಗಳನ್ನು ನೀಡಿದ ಬಳಿಕವೂ ಒಪ್ಪಿಕೊಂಡಿರಲಿಲ್ಲ.

‘ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)–2020ರಲ್ಲಿ ಮೂರು ಭಾಷೆ ಗಳನ್ನು ಕಲಿಯಲು ಮಕ್ಕಳಿಗೆ ಅವಕಾಶ ನೀಡಬೇಕೆಂಬ ಅಂಶವಿರುವುದರಿಂದ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸುವ ಅಗತ್ಯ ಉದ್ಭವಿಸುವುದಿಲ್ಲ ಎಂಬ ಅರ್ಥದಲ್ಲಿ 2021ರ ಫೆಬ್ರುವರಿ 3ರಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯದ ಸಂಸದೀಯ ವ್ಯವಹಾರಗಳ ಇಲಾಖೆಗೆ ಪತ್ರ ಬರೆದಿತ್ತು. ಈ ಕುರಿತು ಸ್ಪಷ್ಟನೆ ನೀಡಬೇಕು ಅಥವಾ ಮಸೂದೆ ಹಿಂಪಡೆಯಬೇಕು ಎಂದು ಸೂಚಿಸಿತ್ತು. ಆ ಬಳಿಕವೂ ನಿರಂತರವಾಗಿ ನೆನಪೋಲೆ ಬರೆಯುತ್ತಿರುವ ಕೇಂದ್ರ ಗೃಹ ಇಲಾಖೆ, ಮಸೂದೆ ಹಿಂಪಡೆಯುವ ಬಗ್ಗೆ ತೀರ್ಮಾನಿಸುವಂತೆ ಒತ್ತಾಯ ಮಾಡು ತ್ತಲೇ ಇದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಸೂದೆ ಹಿಂಪಡೆಯುವ ವಿಚಾರದಲ್ಲಿ ಕೇಂದ್ರ ಗೃಹ ಇಲಾಖೆಯ ಪತ್ರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ರವಾನಿಸಿದ್ದ ಸಂಸದೀಯ ವ್ಯವಹಾರಗಳ ಇಲಾಖೆ, ಉತ್ತರಿಸುವಂತೆ ಸೂಚಿಸಿತ್ತು. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಹಾಗಾಗಿ, ಮಸೂದೆ ಕೇಂದ್ರದಲ್ಲೇ ಉಳಿದಿದೆ’ ಎಂದರು.

‘ಷಡ್ಯಂತ್ರ ಕಾರಣ’

‘ಎನ್‌ಇಪಿ ಅನುಷ್ಠಾನದ ಹೆಸರಿನಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡುವುದನ್ನು ಕಡ್ಡಾಯ ಗೊಳಿಸುವ ಮಸೂದೆಯನ್ನು ತಡೆಯುವುದು ಸರಿಯಲ್ಲ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ವಿರೋಧಿಸುವ ಅಧಿಕಾರಿಶಾಹಿಯ ಷಡ್ಯಂತ್ರ ಇದರ ಹಿಂದಿದೆ’ ಎಂದು ದೂರುತ್ತಾರೆ ಮೈಸೂರಿನ ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಾ.ರ. ಸುದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.