ಬೆಂಗಳೂರು: 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಕರ್ನಾಟಕ ರಾಜ್ಯಕ್ಕೆ ಪ್ರಸಕ್ತ ಸಾಲಿನ (2023–24) ಕೇಂದ್ರದ ಪಾಲಿನ ರಾಜ್ಯ ವಿಪತ್ತು ಸ್ಪಂದನೆ ನಿಧಿಯ (ಎಸ್ಡಿಆರ್ಎಫ್) ಎರಡನೇ ಕಂತು ₹348.80 ಕೋಟಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಮಧ್ಯಪ್ರದೇಶ, ಕರ್ನಾಟಕ, ಪಂಜಾಬ್ ಮತ್ತು ಉತ್ತರಾಖಂಡ ಈ ನಾಲ್ಕು ರಾಜ್ಯಗಳಿಗೆ ಎರಡನೇ ಕಂತಿನ ಒಟ್ಟು ಮೊತ್ತ ₹ 1,783.20 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚಗಳ ಇಲಾಖೆಯ ಉಪ ಕಾರ್ಯದರ್ಶಿ ತಮ್ಮದೇ ಇಲಾಖೆಯ ಹಿರಿಯ ಲೆಕ್ಕಾಧಿಕಾರಿಗೆ (ರಾಜ್ಯ– ಸಾಲ) 12ರಂದು ಸೂಚನೆ ನೀಡಿದ್ದಾರೆ.
‘ಕೇಂದ್ರ ಗೃಹ ಸಚಿವಾಲಯದಿಂದ ಸ್ವೀಕರಿಸಿದ ಶಿಫಾರಸಿನ ಆಧಾರದಲ್ಲಿ ರಾಜ್ಯ ಸರ್ಕಾರಗಳಿಗೆ ಈ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಹಣವನ್ನು ಸಂಬಂಧಿಸಿದ ರಾಜ್ಯ ಸರ್ಕಾರಗಳ ಖಾತೆಗಳಿಗೆ ತಕ್ಷಣ ಜಮೆ ಮಾಡುವಂತೆಯೂ ಆರ್ಬಿಐಗೆ ಮನವಿ ಮಾಡಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.
ಎಸ್ಡಿಆರ್ಎಫ್ ರೂಪದಲ್ಲಿ ಐದು ವರ್ಷದ ಅವಧಿಗೆ ರಾಜ್ಯಕ್ಕೆ ₹4,369 ಕೋಟಿ ನಿಗದಿಪಡಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ₹1,803 ಕೋಟಿ ಬಿಡುಗಡೆಯಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹929 ಕೋಟಿ ನಿಗದಿಪಡಿಸಲಾಗಿದೆ. ಈ ಪೈಕಿ, ಜುಲೈ ತಿಂಗಳಲ್ಲಿ ಮೊದಲ ಕಂತಿನ ರೂಪದಲ್ಲಿ ₹348.80 ಕೋಟಿ ಬಿಡುಗಡೆ ಮಾಡಲಾಗಿತ್ತು. ಪ್ರತಿ ವರ್ಷ ಎರಡು ಸಮಾನ ಕಂತುಗಳಲ್ಲಿ ಕೇಂದ್ರದ ಪಾಲನ್ನು ಎಸ್ಡಿಆರ್ಎಫ್ಗೆ ಬಿಡುಗಡೆ ಮಾಡಲಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ, ಹಿಂದಿನ ಕಂತಿನಲ್ಲಿ ಬಿಡುಗಡೆಯಾದ ಮೊತ್ತದ ಬಳಕೆಯ ಪ್ರಮಾಣಪತ್ರದ ಸ್ವೀಕೃತಿ ಮತ್ತು ಎಸ್ಡಿಆರ್ಎಫ್ನಿಂದ ಕೈಗೊಂಡ ಚಟುವಟಿಕೆ ಕುರಿತು ರಾಜ್ಯ ಸರ್ಕಾರದಿಂದ ವರದಿ ಸ್ವೀಕರಿಸಿದ ಬಳಿಕ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.