ADVERTISEMENT

ಅಧ್ಯಕ್ಷ– ಎಂಡಿ ಕಿತ್ತಾಟ ತಾರಕಕ್ಕೆ: ಆ್ಯಸಿಡ್‌ ಬೆದರಿಕೆ ಹಾಕಿದ್ದರು ಎಂದ ರೂಪಾ

ಸಿಎಸ್‌ಗೆ ದೂರು ನೀಡಿದ ರಾಘವೇಂದ್ರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 20:24 IST
Last Updated 2 ಜೂನ್ 2022, 20:24 IST
   

ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಮಧ್ಯದಕಿತ್ತಾಟ ಇನ್ನೂ ತಾರಕಕ್ಕೇರಿದೆ.

ರಾಘವೇಂದ್ರ ಶೆಟ್ಟಿ ಅವರು ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಗುರುವಾರ ಭೇಟಿ ಮಾಡಿ ದೂರು ನೀಡಿದ್ದಾರೆ. ಈ ಮಧ್ಯೆ ಮೇ 27 ರಂದು ನಡೆದ ನಿಗಮದ ವಾರ್ಷಿಕ ಸಭೆಯಲ್ಲಿ ಇಬ್ಬರ ಮಧ್ಯದ ವಾಕ್ಸಮರದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ‘ತಾವು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರೂಪಾ ಅವರೇ ಕಾರಣರು’ ಎಂದು ಸಭೆಯಲ್ಲಿ ಎಲ್ಲರ ಮುಂದೆ ರಾಘವೇಂದ್ರ ಹೇಳಿರುವುದು ವಿಡಿಯೊದಲ್ಲಿದೆ.

ಮುಖ್ಯ ಕಾರ್ಯದರ್ಶಿ
ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಘವೇಂದ್ರ
ಶೆಟ್ಟಿ, ‘ನನ್ನ ವಿರುದ್ಧ ಅವ್ಯವಹಾರದ ಆರೋಪ ಮಾಡಿರುವ ರೂಪಾ ಅವರು ಒಂದು ದಾಖಲೆಯನ್ನಾದರೂ ಬಿಡುಗಡೆ ಮಾಡಲಿ. ₹24 ಕೋಟಿ ಹಗರಣ ನನ್ನ ಅವಧಿಯಲ್ಲಿ ನಡೆದಿಲ್ಲ. ನಾನು ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ನಡೆದಿದೆ. ಆದರೆ, ಅವರ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂಬ ಭಯಕ್ಕೆ ಮಾಧ್ಯಮಗಳ ಮುಂದೆ ನನ್ನ ವಿರುದ್ಧ ಇಲ್ಲ ಸಲ್ಲದ
ಆಪಾದನೆಗಳನ್ನು ಮಾಡುತ್ತಿದ್ದಾರೆ. ನಿಗಮದ ಮಳಿಗೆಯಿಂದ ನಾನು ಯಾವುದೇ ಶ್ರೀಗಂಧದ ವಸ್ತು
ಗಳನ್ನು ತೆಗೆದುಕೊಂಡಿಲ್ಲ.ಐದಾರು ವಸ್ತುಗಳನ್ನು ಹಣಕೊಟ್ಟು ಖರೀದಿಸಿದ್ದೇನೆ. ಅದಕ್ಕೆ ಸಂಬಂಧಿಸಿದ ಬಿಲ್‌ ಕೂಡಾ ಇದೆ’ ಎಂದು ಅವರು ಹೇಳಿದರು.

ADVERTISEMENT

ಆತ್ಮಹತ್ಯೆ ಮಾಡಿಕೊಂಡರೆ ರೂಪಾ ಕಾರಣ: ಮೇ ತಿಂಗಳಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಇಬ್ಬರೂ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ‘ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಂಡರೆ ರೂಪಾ ಅವರೇ ಕಾರಣರಾಗುತ್ತಾರೆ’ ಎಂದು ರಾಘವೇಂದ್ರ ಹೇಳುವಾಗ ರೂಪಾ ಅವರು ಸಭೆಯಿಂದ ಎದ್ದು ಹೊರ ನಡೆಯುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಆ್ಯಸಿಡ್‌ ಬೆದರಿಕೆ ಹಾಕಿದ್ದರು: ರೂಪಾ

‘ಅಧ್ಯಕ್ಷ ರಾಘವೇಂದ್ರ ಶೆಟ್ಟಿ ನನ್ನ ಮುಖಕ್ಕೆ ಆ್ಯಸಿಡ್‌ ಎರಚಿಸುವ ಬೆದರಿಕೆ ಹಾಕಿದ್ದು, ನಾನು ಇಂತಹ ಬೆದರಿಕೆಗಳನ್ನು ಲೆಕ್ಕಿಸದೇ ಕೆಲಸ ಮಾಡುತ್ತಾ ಇದ್ದೇನೆ. ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ
ಆ್ಯಸಿಡ್‌ ಬೆದರಿಕೆಯನ್ನು ಎಲ್ಲೂ ಹೇಳಿಲ್ಲ’ ಎಂದು ಡಿ.ರೂಪಾ
ಪ್ರತಿಕ್ರಿಯಿಸಿದ್ದಾರೆ.

‘ನಿಗಮದ ಸಭೆಯಲ್ಲಿ ರಾಘವೇಂದ್ರ ಶೆಟ್ಟಿ ಅವರು ಮಾತನಾಡುತ್ತಾ ತಾನು ಖಿನ್ನತೆಗೆ ಒಳಗಾದರೆ ರೂಪಾ ಅವರೇ ಕಾರಣ ಎಂದು ಬೆದರಿಕೆ ಹಾಕಿದ್ದಾರೆ. ಸಭೆಯಲ್ಲಿ ಒಂದು ಗಂಟೆ ಕೂಗಾಡುತ್ತಾ, ಸಭೆ ನಡೆಸಲು ಬಿಡುವುದಿಲ್ಲ ಎಂದು, ಆತ್ಮಹತ್ಯೆ ಬೆದರಿಕೆ ಒಡ್ಡುವುದು ಐಪಿಸಿ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರ ಬಗ್ಗೆ ಪ್ರಕರಣ ದಾಖಲಿಸಲು ಅನುಮತಿ ಕೊಡಬೇಕು ಎಂದು ಆರು ಪುಟಗಳ ವರದಿಯಲ್ಲಿ ಮುಖ್ಯಕಾರ್ಯದರ್ಶಿಯವರಿಗೆ ಕೋರಿದ್ದೇನೆ’ ಎಂದು
ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.